ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬೆಟಗೇರಿಯ ಪಾಲಾ ಬಾದಾಮಿ ರಸ್ತೆಗೆ ಹೊಂದಿಕೊಂಡಿರುವ ಶ್ರೀ ದೇವರ ದಾಸಿಮಯ್ಯನವರ ಪುತ್ಥಳಿಗೆ 28ನೇ ವಚನ-ವಾಚನ ಕಾರ್ಯಕ್ರಮದ ಅಂಗವಾಗಿ ಶಿವಣ್ಣ ಮುಳಗುಂದ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಕಪೋತಗಿರಿಯ ಶ್ರೀ ನಂದಿವೇರಿ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಮಾತನಾಡಿ, ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ವಚನಗಳು ಪ್ರಸ್ತುತ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ. `ಕರಿಯನಿತ್ತಡೆ ವಲ್ಲೆ, ಸಿರಿಯನಿತ್ತಡೆ ವಲ್ಲೆ ಹಿರಿದಪ್ಪ ರಾಜ್ಜವನಿತ್ತಡೆ ವಲ್ಲೆ ನಿಮ್ಮ ಶರಣರ ಸೂಳ್ನುಡಿ ಒಂದರೆಘಗಳಿಗೆಯಿತ್ತಡೆ ನಿಮ್ಮನಿತ್ತೆ ಕಾಣಾ! ರಾಮನಾಥ’ ಎಂಬ ವಚನ ಮಾರ್ಮಿಕವಾಗಿದೆ. ಪ್ರಸ್ತುತ ಅವಶ್ಯಕತೆಗಳಾದ ಕರಿಯ ನಿತ್ತಡೆವಲ್ಲೆಂದರೆ ಅಧಿಕಾರ, ಐಶ್ವರ್ಯ, ಸಾಮ್ರಾಜ್ಯ ಇಂದಿನ ಸಾಮಾನ್ಯ ಜನರ ಬೇಡಿಕೆಗಳಾಗಿವೆ. ಆದರೆ ಇವು ಯಾವುದೂ ಶಾಶ್ವತವಲ್ಲ. ದೇವರ, ಶರಣರ ಸಾನ್ನಿಧ್ಯ ಒಂದು ಶಾಶ್ವತವಾದ ಅನುಭಾವ ನೀಡುತ್ತದೆ. ನೀವು ನನಗೆ ಕೊಡುವುದಾದರೆ `ಶರಣರ ಸೂಳ್ನುಡಿ’ ಕೇಳುವ ಭಾಗ್ಯ ಕೊಡು, ನಿನ್ನ ಚರಣ ಕಮಲದಲ್ಲಿ ನನಗೆ ಶಾಶ್ವತವಾದ ಸ್ಥಾನ ನೀಡಿದರೆ ಸಾಕು ಎನ್ನುವ ಅರ್ಥದಲ್ಲಿ ವಚನ ಸಾದರಪಡಿಸಿದ್ದಾರೆ ಎಂದು ಹೇಳಿದರು.
ರಾಮಚಂದ್ರ ಹುಬ್ಬಳ್ಳಿ ಮಾತನಾಡಿ, ಅಜ್ಞಾನವ ಅಳಿಸಿ, ಸುಜ್ಞಾನವ ಕರುಣಿಸಿ ಎನ್ನ ಉದ್ಧರಿಸಿದ ಶ್ರೀಗುರುವೇ ನಿನ್ನ ಚರಣ ಕಮಲಕ್ಕೆ ಶರಣಯ್ಯ ಶರಣು ಎನ್ನುವ ವಚನ, ವಾಚನ ಮಾಡಿದರು.
ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ದಶರಥರಾಜ ಕೊಳ್ಳಿ ಸ್ವಾಗತಿಸಿದರು. ಸಮಾಜದ ಹಿರಿಯರಾದ ಶ್ರೀನಿವಾಸ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅನಿಲ ಗಡ್ಡಿ, ಶಂಕರ ಗಂಜಿ, ಬಸವರಾಜ ಮುದಗಲ್ಲ, ಎನ್.ಜೆ. ಪಟ್ಟದಕಲ್ಲ, ಸಂಕಣ್ಣ ಹಾದಿಮನಿ, ದೊಡ್ಡಪ್ಪ ಮೂಲಿಮನಿ, ಶಂಕ್ರಪ್ಪ ತೊಂಡಿಹಾಳ, ಮೋಹನಸಿಂಗ್ ಗಂಗಾವತಿ, ತಿಮ್ಮಣ್ಣ ಗಣಪಾ, ಏಕನಾಥ ರೇವಣಕಿ, ನಾರಾಯಣಪ್ಪ ಕಂಗೂರಿ, ಶ್ರೀನಿವಾಸ ಕರಿ, ಕಲ್ಮೇಶಯ್ಯ ಹಿರೇಮಠ, ಲಕ್ಷ್ಮೀಬಾಯಿ ಹುಬ್ಬಳ್ಳಿ, ಮಹಾದೇವಿ ಸಿನ್ನೂರ ಮುಂತಾದವರು ಭಾಗವಹಿಸಿದ್ದರು.



