ಬೀದಿ ನಾಯಿಗಳ ಹಾವಳಿ, ರೇಬಿಸ್ ಸಮಸ್ಯೆ ಹಾಗೂ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಆತಂಕದ ನಡುವೆ ನಟಿ ನಿವೇತಾ ಪೇತುರಾಜ್ ಅವರ ಹೇಳಿಕೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
“ನಾಯಿ ಕಚ್ಚಿದನ್ನು ದೊಡ್ಡ ವಿಷಯ ಮಾಡಬೇಡಿ” ಎಂದು ಅವರು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಬೀದಿ ನಾಯಿಗಳನ್ನು ಕಾಪಾಡಬೇಕು ಎನ್ನುವ ಅಭಿಯಾನದಲ್ಲಿ ಪಾಲ್ಗೊಂಡಿದ್ದ ನಿವೇತಾ ಅವರ ಈ ನಿಲುವು, ಈಗ ಬೀದಿ ನಾಯಿ ಹಾವಳಿಯಿಂದ ಬಳಲುತ್ತಿರುವ ಜನರಲ್ಲಿ ಕೋಪ ಸೃಷ್ಟಿಸಿದೆ.
ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೇತಾ ಪೇತುರಾಜ್, “ಬೀದಿ ನಾಯಿಗಳ ಬಗ್ಗೆ ಅನಗತ್ಯ ಭಯ ಹರಡಲಾಗುತ್ತಿದೆ. ನಾಯಿ ಕಚ್ಚಿದರೆ ಅದನ್ನು ದೊಡ್ಡ ವಿಷಯ ಮಾಡಬಾರದು. ನಾನು ಅದು ಪರವಾಗಿಲ್ಲ ಅಂತ ಹೇಳುವುದಿಲ್ಲ. ರೇಬಿಸ್ ತುಂಬಾ ಗಂಭೀರ, ಅದರಿಂದ ಆರೋಗ್ಯ ಕೆಡುತ್ತದೆ. ಆದರೆ ಭಯ ಹರಡುವುದರ ಬದಲು ಪರಿಹಾರ ಹುಡುಕಬೇಕು” ಎಂದು ಹೇಳಿದರು.
ಜನರಿಗೆ ಬಾಲ್ಯದಲ್ಲೇ ಕರುಣೆ ಮತ್ತು ಮೃಗಸಂರಕ್ಷಣೆಯ ಅರಿವು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು. “ಯಾರಾದರೂ ತಪ್ಪು ಮಾಡಿದರೆ ಅವರನ್ನು ಕೊಲ್ಲೋದು ಸರಿಯಲ್ಲ. ಅದೇ ರೀತಿ ಪ್ರಾಣಿಗಳನ್ನು ಬೇಡದಂತೆ ಕೊಲ್ಲಬಾರದು. ಲಸಿಕೆ ಹಾಕಿಸುವುದು, ಸಂತಾನಹರಣ ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ನಿವೇತಾ ಹೇಳಿದರು.
ಆದಾಗ್ಯೂ, ಈಗಾಗಲೇ ಬೀದಿ ನಾಯಿಗಳ ಹಾವಳಿಯಿಂದ ತೊಂದರೆ ಅನುಭವಿಸಿರುವ ಅನೇಕರು ಅವರ ಹೇಳಿಕೆಯನ್ನು ಖಂಡಿಸತೊಡಗಿದ್ದಾರೆ. ರೇಬಿಸ್ನಿಂದ ಹಲವು ಪ್ರಾಣಹಾನಿಗಳು ನಡೆದಿರುವ ಸಂದರ್ಭದಲ್ಲೇ ಇಂತಹ ಹೇಳಿಕೆ ನೀಡಿರುವುದು ಜನರಿಗೆ ಅಸಮಾಧಾನ ತಂದಿದೆ. “ನಿವೇತಾ ಪೇತುರಾಜ್ ಶ್ರೀಮಂತರು, ಯಾವಾಗಲೂ ಕಾರಿನಲ್ಲಿ ಸಂಚರಿಸುತ್ತಾರೆ. ಬೀದಿ ನಾಯಿಗಳ ಕಷ್ಟ ಅವರಿಗೆ ತಿಳಿಯದು. ದುಬೈನಲ್ಲಿ ಹೆಚ್ಚು ಕಾಲ ವಾಸಿಸುವವರು ಸಾಮಾನ್ಯ ಜನರ ಪರಿಸ್ಥಿತಿ ಹೇಗಿರುತ್ತದೆ ಎಂದು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ?” ಎಂದು ನೆಟ್ಟಿಗರು ಟೀकಿಸಿದ್ದಾರೆ.



