ಕೊಪ್ಪಳ: ಅಂಜನಾದ್ರಿ ಆಂಜನೇಯ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಲಾಗಿದ್ದ 2.50 ಕೋಟಿ ರೂ. ಮೌಲ್ಯದ ಆಭರಣಗಳ ಬಗ್ಗೆ ನಡೆದ ವಿವಾದದ ನಡುವೆ ಉದ್ಯಮಿ ಮಹೇಶ ರೆಡ್ಡಿ ಖರೀದಿ ಬಿಲ್ ಸಲ್ಲಿಸಿದ್ದಾರೆ.
ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಮ್ಮುಖದಲ್ಲಿ ಪ್ರಭಾವಳಿ, ಚಕ್ರ ಮತ್ತು ಗದೆಯನ್ನು ದೇವಸ್ಥಾನಕ್ಕೆ ದಾನವಾಗಿ ನೀಡಿದ್ದರು. ಆರಂಭದಲ್ಲಿ ಇವು ಬಂಗಾರದ ಆಭರಣಗಳು ಎಂದು ಹೇಳಲಾಗಿತ್ತು.
ಆದರೆ ಜಿಲ್ಲಾಡಳಿತ ಪರಿಶೀಲನೆ ನಡೆಸಿದಾಗ ಆಭರಣಗಳು ಸಂಪೂರ್ಣ ಚಿನ್ನದದ್ದಲ್ಲ, ಬದಲಿಗೆ ಚಿನ್ನ ಲೇಪಿತ ತಾಮ್ರದಿಂದ ತಯಾರಾಗಿವೆ ಎಂಬುದು ಬಹಿರಂಗವಾಯಿತು. ಬಳಿಕ ದಾಖಲೆ ಸಲ್ಲಿಸುವಂತೆ ಉದ್ಯಮಿಗೆ ನೋಟಿಸ್ ನೀಡಲಾಗಿತ್ತು.
ಇದೀಗ ಬಿಡುಗಡೆ ಮಾಡಿರುವ ಬಿಲ್ನಲ್ಲಿ ಏಪ್ರಿಲ್ 28ರಂದು ಚಿನ್ನ ಖರೀದಿ ಮಾಡಿ ಮೇ 8ರಂದು ದೇವಸ್ಥಾನಕ್ಕೆ ದೇಣಿಗೆ ನೀಡಿರುವುದಾಗಿ ಮಹೇಶ ರೆಡ್ಡಿ ತಿಳಿಸಿದ್ದಾರೆ.
ಮುಜರಾಯಿ ಇಲಾಖೆ ನಿಯಮದಂತೆ ದೇವಾಲಯಕ್ಕೆ ದೇಣಿಗೆಯಾಗಿ ಬರುವ ಅಮೂಲ್ಯ ವಸ್ತುಗಳ ಮೌಲ್ಯಮಾಪನ ಮತ್ತು ದಾಖಲೆ ಕಡ್ಡಾಯವಾಗಿದ್ದು, ಸದ್ಯ ಅಧಿಕಾರಿಗಳು ಆಭರಣಗಳ ನಿಖರ ಮೌಲ್ಯ ಮತ್ತು ತೂಕ ಪರಿಶೀಲನೆ ನಡೆಸುತ್ತಿದ್ದಾರೆ.



