ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟು ಬಿತ್ತನೆಯಾದ ಬೆಳೆಗಳು ಒಣಗುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಕದರಗೇರಿ ಓಣಿಯ ನಾಗರಿಕರು ವರುಣ ದೇವನ ಕೃಪೆಗಾಗಿ ಸಾಂಪ್ರದಾಯಿಕವಾಗಿ ಕಪ್ಪೆ ಮದುವೆ ಹಾಗೂ ನೀರೆರಚುವ ಹಬ್ಬ ಆಚರಿಸಿ ಮಳೆಯಿಗಾಗಿ ಪ್ರಾರ್ಥಿಸಿದರು.
ಮೇ ಅಂತ್ಯ ಹಾಗೂ ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಿರುವ ಬೆಳೆಗಳಿಗೆ ಇದೀಗ ಮಳೆಯ ಅಗತ್ಯತೆ ಇದ್ದರೂ ಕಳೆದ ಎಂಟು ದಿನಗಳಿಂದ ಮಳೆಯ ಸುಳಿವಿಲ್ಲದೆ ಬಿರು ಬಿಸಿಲು ಮುಂದುವರಿದಿದೆ. ಇದರಿಂದ ಮೊಳಕೆಯೊಡೆದ ಬೆಳೆಗಳು ಬಾಡುವ ಭೀತಿ ಎದುರಾಗಿದ್ದು, ರೈತ ಸಮುದಾಯ ಆತಂಕಕ್ಕೆ ಒಳಗಾಗಿದೆ.
ಈ ಹಿನ್ನೆಲೆಯಲ್ಲಿ ಗುರುವಾರ ಕದರಗೇರಿ ಓಣಿಯ ದೇವಸ್ಥಾನದ ಆವರಣದಲ್ಲಿ ಸಂಪ್ರದಾಯಬದ್ಧವಾಗಿ ಕಪ್ಪೆಗಳ ಮದುವೆ ನೆರವೇರಿಸಲಾಯಿತು. ದೇವಸ್ಥಾನವನ್ನು ರಂಗೋಲಿ, ತಳಿ-ತೋರಣಗಳಿಂದ ಅಲಂಕರಿಸಲಾಗಿದ್ದು, ನೂರಾರು ಭಕ್ತರು ಕಪ್ಪೆಗಳಿಗೆ ಅಕ್ಷತೆ ಹಾಕಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು.
ವಿಶೇಷವಾಗಿ ಪುಟ್ಟ ಮಕ್ಕಳಿಬ್ಬರನ್ನು ಮದುಮಕ್ಕಳ ವೇಷದಲ್ಲಿ ಸಿಂಗರಿಸಿ ಅರಿಶಿನ ಶಾಸ್ತ್ರ, ಮದುವೆ ಶಾಸ್ತ್ರ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಪರಸ್ಪರ ನೀರೆರಚಿಕೊಂಡು ಸಂಭ್ರಮಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕಪ್ಪೆಗಳಿಗೆ ಮದುವೆ ಮಾಡಿದರೆ ವರುಣ ದೇವ ಪ್ರಸನ್ನನಾಗಿ ಮಳೆ ಸುರಿಸುತ್ತಾನೆ ಎಂಬ ಜನನಂಬಿಕೆ ಇಂದಿಗೂ ಜೀವಂತವಾಗಿದ್ದು, ಮಳೆ ಕೊರತೆಯ ಸಂದರ್ಭಗಳಲ್ಲಿ ಕಪ್ಪೆ ಅಥವಾ ಕತ್ತೆಗಳ ಮದುವೆ, ಗುರ್ಜಿ ಆಟ, ಭಜನೆ ಮೊದಲಾದ ಆಚರಣೆಗಳನ್ನು ನಡೆಸುವ ಸಂಪ್ರದಾಯ ಮುಂದುವರಿದಿದೆ.
ಕಾರ್ಯಕ್ರಮದ ಬಳಿಕ ಸಿದ್ಧಪಡಿಸಿದ್ದ ಸಂಗಟಿ–ಸಾರು ಸೇರಿದಂತೆ ಸಾಂಪ್ರದಾಯಿಕ ಊಟವನ್ನು ಎಲ್ಲರೂ ಸವಿದರು.
ಈ ಸಂದರ್ಭದಲ್ಲಿ ಲಕ್ಷ್ಮವ್ವ ಗಿಡಿಬಿಡಿ, ದೀಪಾ ಗಿಡಿಬಿಡಿ, ರೇವತಿ ಉಪನಾಳ, ವಾಣಿ ಹತ್ತಿ, ನಿಂಗವ್ವ ಟೋಕಾಳಿ, ಗದಿಗೆವ್ವ ಟೋಕಾಳಿ, ಮಂಜವ್ವ ಗಿಡಿಬಿಡಿ, ಬಸಮ್ಮ ಗಿಡಿಬಿಡಿ, ಗಂಗಮ್ಮ ಗಡೆಪ್ಪನವರ, ಸಾವಿತ್ರಿ ಗಡೆಪ್ಪನವರ, ಶಾಂತಾ ಡಂಬಳ, ಅನ್ನಪೂರ್ಣ ಲಿಂಗಶೆಟ್ಟಿ, ಲಕ್ಷ್ಮವ್ವ ಹುರಕನವರ, ರೇಣುಕಾ ಅಡರಕಟ್ಟಿ, ನೀಲಪ್ಪ ಹತ್ತಿ, ಸೋಮೇಶ ಉಪನಾಳ, ಮಹಾದೇವಪ್ಪ ಗಿಡಿಬಿಡಿ, ಮಂಜುನಾಥ ಲಿಂಗಶೆಟ್ಟಿ, ಸೋಮಣ್ಣ ಚಂದರಗಿ, ಅಜ್ಜಪ್ಪ ಬಡಿಗೇರ, ಗಂಗಾಧರ ಶಿರಿಗಣ್ಣವರ, ಶಿವಪ್ಪ ಗಿಡಿಬಿಡಿ ಸೇರಿದಂತೆ ಮಹಿಳೆಯರು, ಮಕ್ಕಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
“ಮಳೆ ಕೊರತೆಯಿಂದ ರೈತರು ಆತಂಕದಲ್ಲಿದ್ದಾರೆ. ವರುಣ ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಬೆಳೆಗಳು ಉಳಿಯಲಿ ಎಂಬ ನಂಬಿಕೆಯಿಂದ ಕಪ್ಪೆ ಮದುವೆ ಮತ್ತು ನೀರೆರಚುವ ಹಬ್ಬ ಆಚರಿಸಿದ್ದೇವೆ.”
– ಸ್ಥಳೀಯರು



