ಬೆಂಗಳೂರು: ಜೂನ್ನಿಂದ ಆಗಸ್ಟ್ವರೆಗಿನ ಹಾವುಗಳ ಸಂತಾನೋತ್ಪತ್ತಿ ಕಾಲದಲ್ಲಿ ಬೆಂಗಳೂರಿನಲ್ಲಿ ಹಾವು ಪ್ರಕರಣಗಳು ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ವಲಯಗಳಲ್ಲಿ ಕೇವಲ 7 ಮಂದಿ ಹಾವು ರಕ್ಷಕರೇ ಕಾರ್ಯನಿರ್ವಹಿಸುತ್ತಿದ್ದಾರೆ. ನಿಯಮದ ಪ್ರಕಾರ ಪ್ರತಿ ವಲಯಕ್ಕೆ ಕನಿಷ್ಠ ನಾಲ್ಕು ರಕ್ಷಕರು ಇರಬೇಕಾದರೂ, ಈಗ ಎಲ್ಲಾ ವಲಯಗಳಲ್ಲಿ ಸಿಬ್ಬಂದಿ ಕೊರತೆ ಇದೆ.
ದಿನಕ್ಕೆ 100ಕ್ಕೂ ಹೆಚ್ಚು ಹಾವು ರೆಸ್ಕ್ಯೂ ಕರೆಗಳು ಬರುತ್ತಿದ್ದರೂ, ರಕ್ಷಕರು 10 ರಿಂದ 15 ಕರೆಗಳಿಗೆ ಮಾತ್ರ ಸ್ಪಂದಿಸಲು ಸಾಧ್ಯವಾಗುತ್ತಿದೆ. ಉಳಿದ ಕರೆಗಳಿಗೆ ತಕ್ಷಣ ಸಹಾಯ ಸಿಗದ ಕಾರಣ ಜನರು ಭಯದಿಂದ ಹಾವುಗಳನ್ನು ಕೊಲ್ಲುವ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ನಗರದಲ್ಲಿ ನಾಗರಹಾವು, ಕಟ್ಟುಹಾವು ಹಾಗೂ ರಸೆಲ್ಸ್ ವೈಪರ್ ಸೇರಿದಂತೆ ವಿಷಪೂರಿತ ಹಾವುಗಳ ಪ್ರಕರಣಗಳು ಹೆಚ್ಚಾಗಿದೆ ಎಂದು ವನ್ಯಜೀವಿ ತಜ್ಞರು ಎಚ್ಚರಿಸಿದ್ದಾರೆ. ಇವು ಅತ್ಯಂತ ಅಪಾಯಕಾರಿ ಹಾವುಗಳಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ, ಹಾವು ರಕ್ಷಕರಿಗೆ ಕಳೆದ 6 ತಿಂಗಳಿಂದ ಗೌರವಧನ ಪಾವತಿಯಾಗಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಗೌರವಧನ ಹೆಚ್ಚಿಸುವ ಪ್ರಸ್ತಾವನೆ ಬಾಕಿಯಲ್ಲಿರುವುದರಿಂದ ರಕ್ಷಣಾ ಕಾರ್ಯದಲ್ಲಿ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.



