HomeArt and Literatureಅರಿವೇ ನಿಜವಾದ ಗುರು...

ಅರಿವೇ ನಿಜವಾದ ಗುರು…

For Dai;y Updates Join Our whatsapp Group

ಗುರು ಎಂದರೆ ಕೇವಲ ವ್ಯಕ್ತಿಯಲ್ಲ; ಅಜ್ಞಾನವನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಹಚ್ಚುವ ಶಕ್ತಿ. ಭಾರತೀಯ ಸಂಸ್ಕೃತಿಯಲ್ಲಿ “ಗುರು ಬ್ರಹ್ಮಾ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ” ಎಂಬ ಶ್ಲೋಕವು ಗುರುವಿನ ಸ್ಥಾನವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿಪಾದಿಸುತ್ತದೆ. ಮನುಷ್ಯನ ಬದುಕಿಗೆ ದಿಕ್ಕು, ದೃಷ್ಟಿ, ಸಂಸ್ಕಾರ ಮತ್ತು ಮೌಲ್ಯಗಳನ್ನು ನೀಡುವ ಮಹಾನ್ ವ್ಯಕ್ತಿತ್ವವೇ ಗುರು. ಅಂತಹ ಗುರುಗಳ ಬಗ್ಗೆ ಕೃತಜ್ಞತೆ ಸಲ್ಲಿಸುವ ದಿನವೇ ಗುರುಪೂರ್ಣಿಮೆ.

ಈ ದಿನವನ್ನು ವೇದವ್ಯಾಸರ ಜನ್ಮದಿನ ಅಥವಾ ವ್ಯಾಸಪೂರ್ಣಿಮೆ ಎಂದೂ ಆಚರಿಸಲಾಗುತ್ತದೆ. ಆದರೆ ಗುರುಪೂರ್ಣಿಮೆ ಕೇವಲ ಧಾರ್ಮಿಕ ಆಚರಣೆಯಲ್ಲ; ಜ್ಞಾನ, ಮೌಲ್ಯ ಹಾಗೂ ಮಾನವೀಯತೆಯನ್ನು ಗೌರವಿಸುವ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.

ಗುರು ಎಂದರೆ ಶಾಲೆಯ ಶಿಕ್ಷಕರಷ್ಟೇ ಅಲ್ಲ. ಜೀವನದಲ್ಲಿ ಸರಿದಾರಿಯನ್ನು ತೋರಿಸುವ ತಾಯಿ-ತಂದೆ, ಶಿಕ್ಷಕರು, ಆಧ್ಯಾತ್ಮಿಕ ಮಾರ್ಗದರ್ಶಕರು, ಸಮಾಜಸೇವಕರು, ಸಾಹಿತ್ಯಕಾರರು, ವಿಜ್ಞಾನಿಗಳು, ಸ್ನೇಹಿತರು ಮತ್ತು ಬದುಕಿನ ಅನುಭವಗಳೂ ನಮ್ಮ ಗುರುಗಳೇ ಆಗಿದ್ದಾರೆ. ಅಜ್ಞಾನವನ್ನು ಕಳೆದು ಅರಿವಿನ ಬೆಳಕನ್ನು ಹಚ್ಚುವ ಪ್ರತಿಯೊಂದು ಶಕ್ತಿಯೂ ಗುರುವಿನ ಸ್ಥಾನದಲ್ಲಿದೆ.

ಭಾರತೀಯ ಪರಂಪರೆಯನ್ನು ಅವಲೋಕಿಸಿದರೆ ಬಸವಾದಿ ಶಿವಶರಣರ ವಚನಗಳು ಬದುಕಿನ ನಿಜಾರ್ಥವನ್ನು ತಿಳಿಸುವ ಅಮೂಲ್ಯ ಜ್ಞಾನದ ಭಂಡಾರಗಳಾಗಿವೆ. ಬದುಕಿನ ಪ್ರತಿಯೊಂದು ಸಂದರ್ಭವನ್ನೂ ವಿವೇಕದಿಂದ ಎದುರಿಸಿದಾಗ ಮಾತ್ರ ಅನಗತ್ಯ ಗೊಂದಲಗಳಿಂದ ದೂರವಿರಲು ಸಾಧ್ಯ. “ಅರಿವೇ ಗುರು” ಎಂಬ ಭಾವನೆಯೇ ವ್ಯಕ್ತಿಯನ್ನು ನೈತಿಕವಾಗಿ ಉನ್ನತಿಗೇರಿಸುತ್ತದೆ.

ಇಂದು ಗುರುಪೂರ್ಣಿಮೆಯ ಹೆಸರಿನಲ್ಲಿ ಆಧ್ಯಾತ್ಮಿಕತೆಯ ಮಾತುಗಳು ಹೆಚ್ಚಾಗಿದ್ದರೂ, ನಿಜವಾದ ಆಧ್ಯಾತ್ಮ ಅಪರೂಪವಾಗುತ್ತಿದೆ. ಆಧ್ಯಾತ್ಮವೆಂದರೆ ಆಡಂಬರದ ಬದುಕಲ್ಲ; ಆಸೆ-ಆಮಿಷಗಳನ್ನು ಮೀರಿ ಸರಳ, ಮೌಲ್ಯಯುತ ಬದುಕು ನಡೆಸುವುದೇ ನಿಜವಾದ ಸಾಧನೆ. ಆದರೆ ಇತ್ತೀಚಿನ ದಿನಗಳಲ್ಲಿ ವೈಭವದ ಪ್ರದರ್ಶನ ಮತ್ತು ವ್ಯಾಮೋಹಗಳಲ್ಲಿ ಸಿಲುಕಿರುವ ಕೆಲವರು ಗುರುವಿನ ಪವಿತ್ರ ಸ್ಥಾನಕ್ಕೆ ಧಕ್ಕೆಯುಂಟು ಮಾಡುತ್ತಿರುವುದು ವಿಷಾದನೀಯ.

ಈ ಸಂದರ್ಭದಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳು ನೆನಪಾಗುತ್ತಾರೆ. ಅವರ ಪ್ರತಿಯೊಂದು ನುಡಿಮುತ್ತೂ ಬದುಕಿಗೆ ದಾರಿದೀಪವಾಗಿತ್ತು. ಸರಳತೆ, ನಿಸ್ವಾರ್ಥತೆ ಮತ್ತು ಜೀವನಮೌಲ್ಯಗಳನ್ನು ಬೋಧಿಸಿದ ಅವರ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಅವರಂತಹ ಆದರ್ಶಗಳನ್ನು ಇಂದಿನ ಸಮಾಜ ಅನುಸರಿಸುವ ಅಗತ್ಯ ಹೆಚ್ಚಿದೆ.

ಇದು ಮಾಹಿತಿಯ ಯುಗ. ಮಾಹಿತಿ ಎಲ್ಲೆಡೆ ಸಿಗುತ್ತಿದೆ. ಆದರೆ ಮೌಲ್ಯಯುತ ಜ್ಞಾನ ಮಾತ್ರ ವಿರಳವಾಗುತ್ತಿದೆ. ತಂತ್ರಜ್ಞಾನ ಬೆಳೆಯುತ್ತಿದ್ದರೂ ಸಹನೆ, ಮಾನವೀಯತೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಗಳು ಕುಗ್ಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಇಂದಿನ ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ. ಅವರು ಮಾರ್ಗದರ್ಶಕರು, ಮೌಲ್ಯ ಶಿಕ್ಷಣದ ಹರಿಕಾರರು, ಮನೋಬಲ ತುಂಬುವವರು ಹಾಗೂ ಸಮಾಜ ಪರಿವರ್ತನೆಯ ಶಿಲ್ಪಿಗಳು. ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಸಾಮಾಜಿಕ ಜಾಲತಾಣಗಳ ವ್ಯಸನ ಮತ್ತು ಕುಟುಂಬ ಮೌಲ್ಯಗಳ ಕುಸಿತದ ನಡುವೆ ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ವ ಪಡೆದಿದೆ.

ಕುಟುಂಬವೂ ಮೊದಲ ಪಾಠಶಾಲೆಯೇ. ತಾಯಿ-ತಂದೆಯೇ ಮಗುವಿನ ಮೊದಲ ಗುರುಗಳು. ಪ್ರೀತಿ, ಶಿಸ್ತು, ಪ್ರಾಮಾಣಿಕತೆ, ಸೇವಾ ಮನೋಭಾವ ಹಾಗೂ ಮಾನವೀಯತೆಯನ್ನು ಕುಟುಂಬದಲ್ಲಿಯೇ ಕಲಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ.

ಇಂದು ಮೊಬೈಲ್ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗುತ್ತದೆ. ಆದರೆ ಮಾಹಿತಿಯನ್ನು ಯಂತ್ರ ನೀಡಬಹುದು; ಬದುಕಿನ ಮೌಲ್ಯಗಳನ್ನು ಕಲಿಸುವುದು ಆದರ್ಶ ಗುರುವಿಗೆ ಮಾತ್ರ ಸಾಧ್ಯ. ಆದ್ದರಿಂದ ತಂತ್ರಜ್ಞಾನದ ಜೊತೆಗೆ ವಿವೇಕ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಗುರುಗಳ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ.

ಅವಸರದ ಬದುಕು, ಸಹನೆಯ ಕೊರತೆ, ಸಂಬಂಧಗಳ ಬಿರುಕು ಹಾಗೂ ಸ್ವಾರ್ಥದ ನಡುವೆ ಮನುಷ್ಯ ತನ್ನೊಳಗೆ ಬದಲಾವಣೆ ತರಲು ಕಲಿತಾಗ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ಸಾಧ್ಯ. ಉತ್ತಮ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು.

ಗುರುವನ್ನು ಗೌರವಿಸುವ ಸಮಾಜವೇ ಜ್ಞಾನವಂತ ಸಮಾಜ. ಮೌಲ್ಯಗಳನ್ನು ಬೆಳೆಸುವ ಶಿಕ್ಷಣವೇ ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತದೆ. ಕೃತಜ್ಞತೆಯೇ ಮಾನವೀಯತೆಯ ಅತ್ಯುನ್ನತ ಗುಣ. ಉತ್ತಮ ಗುರುಗಳನ್ನು ರೂಪಿಸುವುದು ಉತ್ತಮ ಭವಿಷ್ಯವನ್ನು ಕಟ್ಟುವಂತೆಯೇ ಆಗಿದೆ.

ಹೀಗಾಗಿ ಗುರುಪೂರ್ಣಿಮೆ ಕೇವಲ ಒಂದು ಹಬ್ಬವಲ್ಲ; ಅದು ಜ್ಞಾನದ ಬೆಳಕನ್ನು ಆರಾಧಿಸುವ ಜೀವನದರ್ಶನ. ವರ್ಷಕ್ಕೊಮ್ಮೆ ಆಚರಿಸುವ ದಿನವಾಗಿ ಉಳಿಯದೆ, ಪ್ರತಿದಿನವೂ ಗುರುವಿನ ಬೋಧನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು. ಆಗ ಮಾತ್ರ ಜ್ಞಾನ, ಸಂಸ್ಕಾರ, ಮಾನವೀಯತೆ ಮತ್ತು ನೈತಿಕತೆಯಿಂದ ಕೂಡಿದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ.

Oplus_16908288

– ಶ್ರೀಮತಿ ಸುಧಾ ಹುಚ್ಚಣ್ಣವರ
ಉಪನ್ಯಾಸಕರು ಹಾಗೂ ಲೇಖಕರು, ಗದಗ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img