ನ್ಯೂಯಾರ್ಕ್/ನವದೆಹಲಿ: ಕಳೆದ ನವೆಂಬರ್ 2025ರಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಸಮೀಪ ನಡೆದ ಭೀಕರ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ತನ್ನ 38ನೇ ‘Analytical Support and Sanctions Monitoring Team’ ವರದಿಯಲ್ಲಿ, ಈ ಉಗ್ರ ದಾಳಿಯನ್ನು ಆಲ್-ಖೈದಾ ಇನ್ ದಿ ಇಂಡಿಯನ್ ಸಬ್ಕಾಂಟಿನೆಂಟ್ (AQIS) ಸಂಘಟನೆಯೇ ನಡೆಸಿದೆ ಎಂದು ಅಧಿಕೃತವಾಗಿ ಉಲ್ಲೇಖಿಸಿದೆ. ಈ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.
ವರದಿಯ ಪ್ರಕಾರ, AQIS ಭಾರತೀಯ ಉಪಖಂಡದಲ್ಲಿ ತನ್ನ ಚಟುವಟಿಕೆಗಳನ್ನು ವೇಗವಾಗಿ ವಿಸ್ತರಿಸುತ್ತಿದ್ದು, ಸಣ್ಣ ತಂಡಗಳ ಮೂಲಕ ಕಾರ್ಯಾಚರಣೆ ನಡೆಸುವ ತಂತ್ರ ಅನುಸರಿಸುತ್ತಿದೆ. ಸಂಘಟನೆ ಹಣಕಾಸು ಮತ್ತು ಲಾಜಿಸ್ಟಿಕ್ಸ್ ಜಾಲವನ್ನು ಬಲಪಡಿಸುವ ಜೊತೆಗೆ, ಬಾಂಗ್ಲಾದೇಶದಲ್ಲಿ ಹೊಸ ನೆಲೆಗಳು ಮತ್ತು ಬೆಂಬಲ ಜಾಲ ನಿರ್ಮಿಸಲು ಸಕ್ರಿಯ ಪ್ರಯತ್ನ ನಡೆಸುತ್ತಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಹಿಂದೆ ಯುಎನ್ ಸದಸ್ಯ ರಾಷ್ಟ್ರವೊಂದು ಈ ದಾಳಿಯ ಹಿಂದೆ ಜೈಷ್-ಎ-ಮೊಹಮ್ಮದ್ (JeM) ಕೈವಾಡವಿದೆ ಎಂದು ಹೇಳಿತ್ತು. ಆದರೆ ಈಗ ಯುಎನ್ಎಸ್ಸಿಯ ಅಧಿಕೃತ ವರದಿ ದಾಳಿಯ ಹೊಣೆಯನ್ನು ನೇರವಾಗಿ AQIS ಮೇಲೆ ಹೊರಿಸಿದೆ.
ವರದಿಯಲ್ಲಿ ಮತ್ತೊಂದು ಆತಂಕಕಾರಿ ಸಂಗತಿಯನ್ನೂ ಉಲ್ಲೇಖಿಸಲಾಗಿದೆ. ಆಲ್-ಖೈದಾ ಹಾಗೂ ಐಸಿಸ್ ಸಂಘಟನೆಗಳು ರಾಸಾಯನಿಕ ಮತ್ತು ಜೈವಿಕ ಆಯುಧಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಮುಂದುವರಿಸಿದ್ದು, ಇತ್ತೀಚೆಗೆ ಐಸಿಸ್ ಪ್ರಕಟಿಸಿದ ‘ಇನ್ವೇಡ್’ ಆನ್ಲೈನ್ ಮ್ಯಾಗಜೀನ್ನಲ್ಲಿ ಸೈನೈಡ್ ಹಾಗೂ ಬೊಟುಲಿನಮ್ ಟಾಕ್ಸಿನ್ ತಯಾರಿಕೆ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ. ಐಸಿಸ್-ಕೆ (ISIL-K) ಸಂಘಟನೆ ರೈಸಿನ್ ವಿಷ ತಯಾರಿಕೆಯ ಮಾರ್ಗಸೂಚಿಗಳನ್ನೂ ಹರಡುತ್ತಿದೆ ಎಂದು ವರದಿ ಎಚ್ಚರಿಸಿದೆ.
ಇದೇ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣದ ತನಿಖೆ ಪೂರ್ಣಗೊಳಿಸಿ, 11 ಆರೋಪಿಗಳ ವಿರುದ್ಧ 7,500 ಪುಟಗಳ ಬೃಹತ್ ಚಾರ್ಜ್ಶೀಟ್ ಸಲ್ಲಿಸಿದೆ. 580ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡಿರುವ ಈ ದೋಷಾರೋಪಣಾ ಪಟ್ಟಿಯ ವಿಚಾರಣೆಯನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಆಗಸ್ಟ್ 27ರಂದು ಕೈಗೆತ್ತಿಕೊಳ್ಳಲಿದೆ.
ನವೆಂಬರ್ 2025ರ ಸಂಜೆ ಸುಮಾರು 7 ಗಂಟೆ ವೇಳೆಗೆ ಕೆಂಪುಕೋಟೆ ಸಮೀಪ ಸಂಚರಿಸುತ್ತಿದ್ದ ಹುಂಡೈ i20 ಕಾರಿನಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಕಾರು ಚಲಾಯಿಸುತ್ತಿದ್ದ ಉಮರ್ ಉನ್ ನಬಿ ಸೇರಿದಂತೆ 11 ಮಂದಿ ಮೃತಪಟ್ಟಿದ್ದರು. ಈ ಘಟನೆ ದೇಶದ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.



