ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಸಮಾಜದ ಆಸ್ತಿ. ಅವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳಾಗಿದ್ದು, ಶಿಕ್ಷಣ ನೀಡಿ ಸಮಾಜ ನಿರ್ಮಾಣ ಮಾಡುವ ಶಿಕ್ಷಕರ ಸೇವೆ ಎಲ್ಲ ಸೇವೆಗಿಂತಲೂ ಮಿಗಿಲಾದದ್ದು ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ.ಸಂಕನೂರ ಹೇಳಿದರು.
ಹೊಳೆಆಲೂರಿನ ಎಸ್.ಎಸ್.ಆಡಿನ ಜನಸೇವಾ ಸಂಸ್ಥೆ ವತಿಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೮ನೇ ಜನ್ಮದಿನದ ಅಂಗವಾಗಿ ಜೆ.ಟಿ. ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ, ‘ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ’ ಪ್ರದಾನ, ನಿವೃತ್ತ ಹಾಗೂ ಸಾಧಕ ಶಿಕ್ಷಕರ ಸನ್ಮಾನ, ‘ವಸುಂಧರೆ’ ಕವನ ಸಂಕಲನ ಬಿಡುಗಡೆ ಮತ್ತು ಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ನೀಡಿದ್ದು, ಮುಂದೆಯೂ ಶಿಕ್ಷಕರ ಸೇವೆಗೆ ಬದ್ಧನಾಗಿರುವುದಾಗಿ ತಿಳಿಸಿದರು. ಶಿಕ್ಷಕರನ್ನು ಗೌರವಿಸುವುದರೊಂದಿಗೆ ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಆಡಿನ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ಶಿಕ್ಷಣದಿಂದ ಸಮಾಜ ಪರಿವರ್ತನೆಯತ್ತ ಸಾಗುತ್ತಿದೆ. ಅಂತಹ ಶಿಕ್ಷಣ ನೀಡಿದ ಶಿಕ್ಷಕರನ್ನು ಸ್ಮರಿಸುವುದು ಕೃತಜ್ಞತೆಯ ಸಂಕೇತ. ಡಾ.ರಾಧಾಕೃಷ್ಣನ್ ಅವರಂತೆ ಸಾವಿತ್ರಿಬಾಯಿ ಫುಲೆ ಅವರನ್ನೂ ಸ್ಮರಿಸುವ ಕಾರ್ಯವಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
‘ವಸುಂಧರೆ’ ಕವನ ಸಂಕಲನ ಬಿಡುಗಡೆಗೊಳಿಸಿದ ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಎಸ್.ಎನ್.ಬಳ್ಳಾರಿ, ಶಿಕ್ಷಣದ ಜತೆಗೆ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಸಾಮಾಜಿಕ ಸೇವೆಗೆ ವೇದಿಕೆ ಕಲ್ಪಿಸುತ್ತಿರುವ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಜೆ.ಟಿ. ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಎಸ್.ಪಟ್ಟಣಶೆಟ್ಟಿ ಮಾತನಾಡಿ, ಶಿಕ್ಷಕರನ್ನು ಗೌರವಿಸುವುದು ಜ್ಞಾನವನ್ನು ಗೌರವಿಸಿದಂತೆ ಎಂದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ.ನಂದಾ ಹಣಬರಟ್ಟಿ ತಮ್ಮ ಬಾಲ್ಯದ ಗುರುಗಳನ್ನು ಸ್ಮರಿಸಿದರು.
ಸಂಸ್ಥೆಯ ಅಧ್ಯಕ್ಷೆ ಶೋಭಾ ಎಸ್.ಆಡಿನ ಅಧ್ಯಕ್ಷತೆ ವಹಿಸಿ, ಶಿಕ್ಷಕರು ಮಕ್ಕಳ ಬದುಕು ರೂಪಿಸುವ ಶಿಲ್ಪಿಗಳು. ನಿವೃತ್ತ ಶಿಕ್ಷಕರು ಬಿತ್ತಿದ ಜ್ಞಾನದ ಬೀಜಗಳು ತಲೆಮಾರುಗಳವರೆಗೆ ಫಲ ನೀಡುತ್ತವೆ ಎಂದರು.
ಸಮಾರಂಭದಲ್ಲಿ ‘ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ–೨೦೨೬’ ಪ್ರದಾನ ಮಾಡಿ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಶಸ್ತಿ ಪುರಸ್ಕೃತರು ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಚನಗೀತೆ, ಸಂಗೀತ, ಚಿತ್ರಕಲೆ ಹಾಗೂ ಗಾಂಧಾರಿ ವಿದ್ಯಾ ಪ್ರದರ್ಶನಗಳು ಗಮನ ಸೆಳೆದವು.
ಬಸವರಾಜ ಎಂ.ಕಡೆಮನಿ, ವಿವೇಕಾನಂದಗೌಡ ಪಾಟೀಲ, ಡಿ.ಎಸ್.ತಳವಾರ, ಎಸ್.ಕೆ.ಆಡಿನ, ಪಾಂಡುರಂಗ ಪತ್ತಾರ ಸೇರಿದಂತೆ ಗಣ್ಯರು, ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



