ವಿಜಯಸಾಕ್ಷಿ ಸುದ್ದಿ, ಗದಗ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಭಾಗವಹಿಸುವುದರಿಂದ ರಾಜಕೀಯದಲ್ಲೂ ನ್ಯಾಯ, ನೀತಿ ಹಾಗೂ ಧರ್ಮದ ಮೌಲ್ಯಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂದು ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಹೇಳಿದರು.
ತಾಲೂಕಿನ ಹಿರೇಹಂದಿಗೋಳ ಗ್ರಾಮದಲ್ಲಿ ನಡೆದ ಶರಣ ಬಸವೇಶ್ವರ 41ನೇ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರಗಾಲದ ನಡುವೆಯೂ ಪುರಾಣ ಪ್ರವಚನ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಗಮನಾರ್ಹ ಎಂದರು.
ಎಷ್ಟೇ ಬರಗಾಲವಿದ್ದರೂ ಧಾರ್ಮಿಕ ಕಾರ್ಯಕ್ರಮಗಳಿಗೆ ರೈತರು ದಾನ-ಧರ್ಮದಲ್ಲಿ ಎಂದಿಗೂ ಹಿಂದೆ ಬೀಳುವುದಿಲ್ಲ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಜೋಳಿಗೆ ಕಾರ್ಯಕ್ರಮ ಹಮ್ಮಿಕೊಂಡಾಗ ಹಿರೇಹಂದಿಗೋಳ ಗ್ರಾಮಸ್ಥರು ದವಸ-ಧಾನ್ಯಗಳನ್ನು ನೀಡಿ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡಿದ್ದರು. ಈ ಮೂಲಕ ಆದರ್ಶ ಮೌಲ್ಯಗಳು ಇಂದಿಗೂ ಸಮಾಜದಲ್ಲಿ ಜೀವಂತವಾಗಿವೆ ಎಂಬುದನ್ನು ರೈತರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಅಭಿನವ ಭೂದೀಶ್ವರ ಶ್ರೀಗಳು ಮಾತನಾಡಿ, ಬದುಕಿಗೆ ಎಲ್ಲವೂ ಬೇಕು. ಎಲ್ಲವೂ ಬೇಕು ಎಂದಾಗ ಅನ್ಯಾಯದ ಮಾರ್ಗದಲ್ಲಿ ಗಳಿಸದೆ ನ್ಯಾಯದ ಮಾರ್ಗದಲ್ಲಿ ಸಂಪಾದಿಸಬೇಕು. ಆಗ ಮಾತ್ರ ಆನಂದದಿಂದ ಬದುಕಲು ಸಾಧ್ಯ ಎಂದರು.
ಸುಖವಿದ್ದಾಗ ನಮ್ಮನ್ನೇ ನಾವು ಮರೆತು, ದುಃಖ ಬಂದಾಗ ಮಾತ್ರ ದೇವರನ್ನು ನೆನೆಯುತ್ತೇವೆ. ಕಷ್ಟ-ಸುಖ ಎಲ್ಲವನ್ನೂ ದೇವರು ನೀಡಿದ್ದಾನೆ. ಆದ್ದರಿಂದ ಎಲ್ಲ ಕಾಲದಲ್ಲೂ ದೇವರ ಕೃಪೆಗೆ ಪಾತ್ರರಾಗಬೇಕು. ದೇವರನ್ನು ಕೇವಲ ಅನುಕೂಲಕ್ಕಾಗಿ ಪ್ರೀತಿಸಬಾರದು. ಮನುಷ್ಯ ದೇವನಾಗಲು ಸಾಧ್ಯವಿಲ್ಲ; ಆದರೆ ದೇವರ ಪ್ರೀತಿಗೆ ಪಾತ್ರನಾಗಬಹುದು. ಮನುಷ್ಯ ಭೂತನಾಗುವತ್ತ ಸಾಗುತ್ತಿರುವುದು ಇಂದಿನ ಕಲಿಗಾಲದ ಉದಾಹರಣೆಯಾಗಿದೆ ಎಂದು ಶ್ರೀಗಳು ಹೇಳಿದರು.
ಯುವ ಮುಖಂಡರಾದ ವಸಂತ ಪಡಗದ, ಸಿದ್ದು ಪಲ್ಲೇದ ಸೇರಿದಂತೆ ಹಿರೇಹಂದಿಗೋಳ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



