ವಿಜಯಸಾಕ್ಷಿ ಸುದ್ದಿ, ಧಾರವಾಡ: ಇಂದಿನ ಮಕ್ಕಳು ಪ್ರತಿಭಾವಂತರಾಗಿದ್ದು, ಶಿಕ್ಷಣದ ಜತೆಗೆ ನೃತ್ಯ, ಸಂಗೀತ, ವೇಷಭೂಷಣ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪಾಲಕರು ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಯುವ ಡಾನ್ಸ್ ಅಕಾಡೆಮಿ ಆಯೋಜಿಸಿದ್ದ ಯುವ ಕೃಷ್ಣ-ಯುವ ರಾಧೆ 2026, ಸೀಸನ್-2 ಮಕ್ಕಳ ಫ್ಯಾಷನ್ ಶೋ, ವೇಷಭೂಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಪ್ರತಿಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಮೊಬೈಲ್ ಅವಲಂಬನೆಯಿಂದ ಹೊರಬಂದು ಸೃಜನಶೀಲ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಪಾಲಕರು ಗಮನಹರಿಸಬೇಕು. ಯುವ ಡಾನ್ಸ್ ಅಕಾಡೆಮಿ ಕಳೆದ ಹಲವು ವರ್ಷಗಳಿಂದ ಮಕ್ಕಳ ಪ್ರತಿಭೆ ಉತ್ತೇಜಿಸುವ ಜತೆಗೆ ಸಮಾಜಮುಖಿ ಹಾಗೂ ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಡಾ. ಎಂ.ಡಿ. ಒಕ್ಕುಂದ ಮಾತನಾಡಿ, ಮಕ್ಕಳ ಪ್ರತಿಭೆ ಬೆಳೆಸುವಲ್ಲಿ ಯುವ ಡಾನ್ಸ್ ಅಕಾಡೆಮಿಯ ಕಾರ್ಯ ಅಭಿನಂದನೀಯ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವು ಹಾಗೂ ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 30 ಮಕ್ಕಳು ರಾಧಾ-ಕೃಷ್ಣ ವೇಷಭೂಷಣ, ಜಾನಪದ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಅಕಾಡೆಮಿ ಸಂಸ್ಥಾಪಕ ರಮೇಶ್ ಪಾಟೀಲ್, ಗೌರವಾಧ್ಯಕ್ಷೆ ರತ್ನಮ್ಮ ಪಾಟೀಲ್, ನಿರ್ಣಾಯಕರಾದ ಸಂತೋಷ್ ಪಾಟೀಲ್ ಹಾಗೂ ಸುರಕ್ಷಾ ಹಿರೇಮಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಮಕ್ಕಳಿಗೂ ವಿವಿಧ ವಿಶೇಷ ಬಿರುದು ನೀಡಿ ಗೌರವಿಸಲಾಯಿತು.
ಮಕ್ಕಳನ್ನು ಮೊಬೈಲ್ ಅವಲಂಬನೆಯಿಂದ ಹೊರತಂದು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಬೇಕು.
— ಶಂಕರ ಹಲಗತ್ತಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿದ್ಯಾವರ್ಧಕ ಸಂಘ



