ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಾನಯೋಗಿ ಶ್ರೀ ಪಂ. ಪಂಚಾಕ್ಷರ ಗವಾಯಿಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ಎರಡನೇ ದಿನವಾದ ಮಂಗಳವಾರ ದಲಾಲ ವರ್ತಕರ ಸಂಘದ ವತಿಯಿಂದ ರೈತಪರ ವಿಶೇಷ ಪೂಜೆ ನೆರವೇರಿಸಲಾಯಿತು.
ಗಣೇಶನ ಮೂರ್ತಿಯ ಮುಂದೆ ಜಿಲ್ಲೆಯ ರೈತರು ಶ್ರಮವಹಿಸಿ ಬೆಳೆದ ಜೋಳ, ಗೋಧಿ, ಹೆಸರು, ತೊಗರಿ, ಕಡಲೆ, ಎಳ್ಳು, ಸೂರ್ಯಕಾಂತಿ ಸೇರಿದಂತೆ ನವಧಾನ್ಯಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಕೃಷಿ ಸಂಸ್ಕೃತಿ ಹಾಗೂ ರೈತರ ಶ್ರಮಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ನವಧಾನ್ಯಗಳ ನೈವೇದ್ಯ ಸಮರ್ಪಿಸಲಾಯಿತು.
ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗದೆ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಉತ್ತಮ ಮಳೆ ಹಾಗೂ ರೈತರ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ದಲಾಲ ಸಂಘದ ಪದಾಧಿಕಾರಿಗಳಾದ ಮಹಾದೇವಪ್ಪ ಗೌರಿಪುರ, ಶಶಿಧರ ಭೀರನವರ, ತಿಮ್ಮಣ್ಣ ಕೋನರೆಡ್ಡಿ, ಹುಚ್ಚಪ್ಪ ಶಹಪೂರ, ಮಂಜುನಾಥ ಬೇಲೆರಿ, ಸಿದ್ಧಣ್ಣ ಮಾರನಬಸರಿ, ಪ್ರಕಾಶ ಉಗಲಾಟದ, ನಿತಿನ್ ವಾರಕರ, ಮಂಜುನಾಥ ಹುಚ್ಚಣ್ಣವರ, ಶರಣಪ್ಪ ಕುರಡಗಿ, ಸೋಮನಗೌಡ ಪಾಟೀಲ ಹಾಗೂ ಶಿವಯ್ಯ ನಾಲ್ವತ್ವಾಡಮಠ ಸೇರಿದಂತೆ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು, ವರ್ತಕರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರಸಿದ್ಧಿ ವಿನಾಯಕನ ಕೃಪೆಯಿಂದ ಗದಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ರೈತರ ಬೆಳೆಗಳು ನಳನಳಿಸಲಿ. ಬರಗಾಲದ ಛಾಯೆ ದೂರವಾಗಿ ಜಿಲ್ಲೆಯ ರೈತರಿಗೆ ಸಮೃದ್ಧಿ ದೊರೆಯಲಿ.
— ಮುರಘರಾಜೇಂದ್ರ ಬಡ್ನಿ, ಅಧ್ಯಕ್ಷರು, ಎಪಿಎಂಸಿ ದಲಾಲ ವರ್ತಕರ ಸಂಘ



