ಅಮರಾವತಿ: ತಿರುಮಲದ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಚಲನವಲನದ ಮೇಲೆ ನಿಗಾ ಇಡುವುದರ ಜೊತೆಗೆ ಭಕ್ತರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (AI) ಆಧಾರಿತ ರೋಬೋಟಿಕ್ ನಾಯಿಗಳನ್ನು ಬಳಸಲು ತಿರುಮಲ ತಿರುಪತಿ ದೇವಸ್ಥಾನಂ (TTD) ಚಿಂತನೆ ನಡೆಸಿದೆ.
ದಟ್ಟ ಅರಣ್ಯ ಪ್ರದೇಶದಲ್ಲಿ ರೋಬೋಟಿಕ್ ನಾಯಿಗಳನ್ನು ನಿಯೋಜಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವ ನಿಟ್ಟಿನಲ್ಲಿ TTD ಹಿರಿಯ ಅಧಿಕಾರಿ ಚ. ವೆಂಕಯ್ಯ ಚೌಧರಿ ಸೇರಿದಂತೆ ಅಧಿಕಾರಿಗಳು ಇತ್ತೀಚೆಗೆ ಶ್ರೀ ಪದ್ಮಾವತಿ ಅತಿಥಿ ಗೃಹದಲ್ಲಿ ಚತುರ್ಭುಜ ರೋಬೋಟ್ ಅನ್ನು ಪರಿಶೀಲಿಸಿದರು.
ನಾಲ್ಕು ಕಾಲುಗಳನ್ನು ಹೊಂದಿರುವ ಈ ರೋಬೋಟಿಕ್ ನಾಯಿ ಅಪಾಯಕಾರಿ ಹಾಗೂ ಜನರಿಗೆ ತೊಂದರೆಯಾಗಬಹುದಾದ ಭೂಪ್ರದೇಶಗಳಲ್ಲೂ ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸುಧಾರಿತ ಕಣ್ಗಾವಲು ಮತ್ತು ಮೇಲ್ವಿಚಾರಣಾ ತಂತ್ರಜ್ಞಾನವನ್ನು ಹೊಂದಿರುವ ರೋಬೋಟ್, 360 ಡಿಗ್ರಿ LiDAR, ಆಪ್ಟಿಕಲ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಒಳಗೊಂಡಿದೆ.
ಸಂಪೂರ್ಣ ಕತ್ತಲೆ, ಮಂಜು ಸೇರಿದಂತೆ ವಿವಿಧ ಹವಾಮಾನ ಪರಿಸ್ಥಿತಿಗಳಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ರೋಬೋಟ್ ಹೊಂದಿದೆ. ಇದರ AI ವ್ಯವಸ್ಥೆಯು ನೈಜ ಸಮಯದಲ್ಲಿ ವಸ್ತುಗಳನ್ನು ಗುರುತಿಸಿ, ಮಾನವರು, ಕಾಡುಪ್ರಾಣಿಗಳು, ಸಾಕುಪ್ರಾಣಿಗಳು ಹಾಗೂ ವಾಹನಗಳ ನಡುವಿನ ವ್ಯತ್ಯಾಸವನ್ನು ಪತ್ತೆಹಚ್ಚಬಲ್ಲದು.
ಅಲ್ಲದೆ, ರೋಬೋಟಿಕ್ ನಾಯಿ ತನ್ನ ಕ್ಯಾಮೆರಾಗಳ ಮೂಲಕ ದೃಶ್ಯಗಳನ್ನು ನೇರ ಪ್ರಸಾರ ಮಾಡಲಿದ್ದು, ಕೇಂದ್ರ ನಿಯಂತ್ರಣ ಕೊಠಡಿ ಹಾಗೂ ತುರ್ತು ಪ್ರತಿಕ್ರಿಯಾ ತಂಡಗಳಿಗೆ ಜಿಯೋ-ಟ್ಯಾಗ್ ಮಾಡಲಾದ ಎಚ್ಚರಿಕೆಗಳನ್ನು ಕಳುಹಿಸುವ ಸಾಮರ್ಥ್ಯ ಹೊಂದಿದೆ.
ವಿಶೇಷವಾಗಿ ಅಲಿಪಿರಿ–ತಿರುಮಲ ಚಾರಣ ಮಾರ್ಗ ಸೇರಿದಂತೆ ಭಕ್ತರು ಹೆಚ್ಚಾಗಿ ಸಂಚರಿಸುವ ಮಾರ್ಗಗಳ ಬಳಿ ಚಿರತೆಗಳು ಸೇರಿದಂತೆ ಕಾಡುಪ್ರಾಣಿಗಳ ಚಲನವಲನವನ್ನು ಪತ್ತೆಹಚ್ಚಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸಂಭಾವ್ಯ ಅಪಾಯ ಪತ್ತೆಯಾದ ತಕ್ಷಣ ರೋಬೋಟಿಕ್ ನಾಯಿ ಲೈವ್ ಥರ್ಮಲ್ ವೀಡಿಯೊವನ್ನು ರವಾನಿಸುವುದರ ಜೊತೆಗೆ ಸ್ಥಳದ ಜಿಯೋ-ಟ್ಯಾಗ್ ಮಾಹಿತಿಯನ್ನು ಅಧಿಕಾರಿಗಳಿಗೆ ಕಳುಹಿಸಲಿದೆ. ಇದರಿಂದ ಪರಿಸ್ಥಿತಿಯನ್ನು ತ್ವರಿತವಾಗಿ ಮೇಲ್ವಿಚಾರಣೆ ಮಾಡಿ, ಅಗತ್ಯವಿದ್ದಲ್ಲಿ ತುರ್ತು ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.



