ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಕುಟುಂಬ, ಶಾಲೆ ಹಾಗೂ ಸಮಾಜದ ಸಹಕಾರದಿಂದ ಮಾತ್ರ ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.
ನಗರದ ಸರ್ಕಾರಿ ಮಾದರಿ ಉರ್ದು ಕೇಂದ್ರ ಶಾಲೆ ನಂ. 2ರಲ್ಲಿ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ‘ಅಕ್ಕ ಪಡೆ’ ವತಿಯಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮಕ್ಕಳ ಸುರಕ್ಷತೆ ತಿಳುವಳಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆಯಲ್ಲಿ ಸುರಕ್ಷಿತ ಹಾಗೂ ಭಯರಹಿತ ಕಲಿಕಾ ವಾತಾವರಣ ನಿರ್ಮಿಸುವುದು, ಶಾಲೆಗೆ ಬರುವಾಗ ಹಾಗೂ ಮನೆಗೆ ಹಿಂದಿರುಗುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು, ಅಪರಿಚಿತರೊಂದಿಗೆ ಸ್ನೇಹ ಬೆಳೆಸದೇ ಇರುವುದು, ಆನ್ಲೈನ್ ಸುರಕ್ಷತೆ, ‘ಗುಡ್ ಟಚ್–ಬ್ಯಾಡ್ ಟಚ್’ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹಮ್ಮದ್ಶಫಿ ಯರಗುಡಿ ಮಾತನಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣದ ಜೊತೆಗೆ ಸುರಕ್ಷಿತ ಹಾಗೂ ಸ್ನೇಹಪರ ವಾತಾವರಣವೂ ಅಗತ್ಯವಾಗಿದೆ. ಯಾವುದೇ ರೀತಿಯ ಕಿರುಕುಳ ಅಥವಾ ತೊಂದರೆ ಎದುರಾದರೆ ಪಾಲಕರು ಅಥವಾ ಶಿಕ್ಷಕರಿಗೆ ಧೈರ್ಯವಾಗಿ ತಿಳಿಸಬೇಕು ಎಂದು ಸಲಹೆ ನೀಡಿದರು.
ಅಕ್ಕ ಪಡೆಯ ಮುಖ್ಯಸ್ಥೆ ಶಂಕ್ರಮ್ಮ ಕೊರವರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಅಪರಿಚಿತರು ನೀಡುವ ಆಹಾರ ಅಥವಾ ಚಾಕೊಲೇಟ್ಗಳನ್ನು ಸ್ವೀಕರಿಸಬಾರದು.
ಶಾಲೆಯಿಂದ ಮನೆಗೆ ತೆರಳುವಾಗ ಒಂಟಿಯಾಗಿ ಹೋಗದೆ ಸ್ನೇಹಿತರೊಂದಿಗೆ ತೆರಳುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ಎಚ್. ಸರಖವಾಸ್ ಮಾತನಾಡಿ, ಶಾಲೆಯಲ್ಲಿ ಪ್ರತಿದಿನ ಪ್ರಾರ್ಥನಾ ವೇಳೆಯಲ್ಲಿ ಮಕ್ಕಳ ಸುರಕ್ಷತೆ ಹಾಗೂ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಪಾಲಕರ ಸಭೆಗಳಲ್ಲಿಯೂ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದು ಹೇಳಿದರು.
ಶಿಕ್ಷಕರಾದ ಎನ್.ಬಿ. ಕರ್ಲವಾಡ ಸ್ವಾಗತಿಸಿದರು. ಎಸ್.ವಿ. ಜಕ್ಕನಗೌಡ ನಿರೂಪಿಸಿದರು. ಡಬ್ಲ್ಯೂ.ಎ. ಶಿರಹಟ್ಟಿ ವಂದಿಸಿದರು. ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸುಧಾ ಪಾಟೀಲ, ಉಮಾ ಕನ್ಯಾಳಹಿರೇಮಠ ಹಾಗೂ ಶಿಕ್ಷಕರಾದ ಶಾಂತಲಾ ಜಂಗಮನಿ, ಜಾಯ್ಸ್ ಜೆ., ವಿಜಯಕುಮಾರ ಲಕ್ಷ್ಮಣನಾಯಕ ಉಪಸ್ಥಿತರಿದ್ದರು.
“ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ಕೇವಲ ಪೊಲೀಸರ ಜವಾಬ್ದಾರಿ ಅಲ್ಲ; ಕುಟುಂಬ, ಶಾಲೆ ಮತ್ತು ಸಮಾಜ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸುರಕ್ಷಿತ ವಾತಾವರಣ ನಿರ್ಮಿಸಲು ಸಾಧ್ಯ.”
– ಕವಿತಾ ದಂಡಿನ, ಸಂಪನ್ಮೂಲ ವ್ಯಕ್ತಿ



