ಬೆಂಗಳೂರು/ಚಿತ್ರದುರ್ಗ: ಶ್ವಾಸಕೋಶದ ಗಂಭೀರ ಸೋಂಕಿನಿಂದ ಜೀವ-ಮರಣ ಹೋರಾಟ ನಡೆಸುತ್ತಿದ್ದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಅವರ ಆರೋಗ್ಯದಲ್ಲಿ ಮಹತ್ವದ ಚೇತರಿಕೆ ಕಂಡುಬಂದಿದೆ. ಕೆಲ ದಿನಗಳಿಂದ ಆತಂಕದಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ದೊಡ್ಡ ನೆಮ್ಮದಿ ಸಿಕ್ಕಿದೆ.
ಸಚಿವರ ಸಹೋದರ ಡಿ.ಕುಮಾರ್ ಮಾಹಿತಿ ನೀಡಿದ್ದು, “ಸುಧಾಕರ್ ಅವರಿಗೆ ಪ್ರಜ್ಞೆ ಬಂದಿದೆ. ಅವರು ಕಣ್ಣು ತೆರೆದು ಪ್ರತಿಕ್ರಿಯೆ ನೀಡಿದ್ದಾರೆ. ನೂರಕ್ಕೆ ನೂರರಷ್ಟು ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ಶೀಘ್ರದಲ್ಲೇ ಹಿರಿಯೂರಿಗೆ ಮರಳಿ ಜನಸೇವೆ ಮುಂದುವರಿಸುತ್ತಾರೆ” ಎಂದು ತಿಳಿಸಿದ್ದಾರೆ.
ಮೊಣಕಾಲಿನ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸಚಿವರಿಗೆ ಬಳಿಕ ಶ್ವಾಸಕೋಶದಲ್ಲಿ ಗಂಭೀರ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ವೈದ್ಯರು ನೀಡಿದ ಮಾಹಿತಿಯಂತೆ, ಅವರು ವೆಂಟಿಲೇಟರ್ ಮತ್ತು ಎಕ್ಮೋ ಸಹಾಯದಿಂದ ಉಸಿರಾಟ ನಡೆಸುತ್ತಿದ್ದರು.
ಕಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಂಜುನಾಥ್ ಹೇಳಿದ್ದಂತೆ, ಸೋಂಕು ನಿಯಂತ್ರಣಕ್ಕೆ ತರಲು ಚಿಕಿತ್ಸೆ ಮುಂದುವರಿಸಲಾಗಿದ್ದು, ಅಗತ್ಯವಿದ್ದರೆ ಶ್ವಾಸಕೋಶ ಕಸಿ ಮಾಡುವ ಸಾಧ್ಯತೆಯೂ ಪರಿಶೀಲಿಸಲಾಗುತ್ತಿತ್ತು. ಈ ಹೇಳಿಕೆಗಳಿಂದಾಗಿ ಅಭಿಮಾನಿಗಳು ಹಾಗೂ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿತ್ತು.
ಸಚಿವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಇದೀಗ ಆರೋಗ್ಯದಲ್ಲಿ ಕಂಡುಬಂದ ಸುಧಾರಣೆ ರಾಜಕೀಯ ವಲಯ ಹಾಗೂ ಅಭಿಮಾನಿಗಳಲ್ಲಿ ಆಶಾಕಿರಣ ಮೂಡಿಸಿದ್ದು, ಸಚಿವರು ಶೀಘ್ರ ಗುಣಮುಖರಾಗಲಿ ಎಂಬ ಪ್ರಾರ್ಥನೆಗಳು ಮುಂದುವರಿದಿವೆ.



