ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆಗಾಗಿ ಸಂಸತ್ತಿನ ವಿಶೇಷ ಅಧಿವೇಶನ ನಡೆಯುತ್ತಿದ್ದು, ಮಹಿಳೆಯರಿಗೂ ಕಾನೂನು ರಚನೆಗೆ ಸಮಾನ ಅವಕಾಶ ಸಿಗಲಿದೆ. ಇದಕ್ಕೆ ವಿರೋಧಪಕ್ಷ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ದೇಶದಲ್ಲಿ ಸರ್ವರಿಗೂ ಸಮಾನ ಹಕ್ಕು ಇರಬೇಕು, ಸಮಾನ ಅವಕಾಶ ಸಿಗಬೇಕು ಎಂದು ಬಯಸಿದ್ದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದೂ ಹೇಳಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾ ಸಾಹೇಬರ ಚಿಂತನೆಗೆ ಶಕ್ತಿ ಕೊಟ್ಟಿದ್ದಾರೆ ಎಂದರು.
ಈ ಹಿಂದೆ ಮಹಿಳೆಯರಿಗೆ ಅವಕಾಶ, ಅಧಿಕಾರ ಮತ್ತು ಸಮಾನ ಹಕ್ಕು ಕೊಡುವಲ್ಲಿ ಬಾಯಿ ಮಾತಿನ ಭಾಷಣ ಇತ್ತೇ ಹೊರತು ಹೃದಯವಂತಿಕೆ ಇರಲಿಲ್ಲ. ಆದರೆ ಇಂದು ನಾರಿ ಶಕ್ತಿ ಹೆಸರಿನಲ್ಲಿ ಪ್ರಧಾನಿಯವರು ಸಂಸತ್ತಿನ ವಿಶೇಷ ಅಧಿವೇಶನ ಕರೆದು ಮಸೂದೆ ಮಂಡಿಸುತ್ತಿದ್ದಾರೆ.
ಇನ್ನು ಮುಂದೆ ಹೆಣ್ಣು ಮಕ್ಕಳಿಗೆ ಎಲ್ಲ ರೀತಿಯ ಅವಕಾಶಗಳ ದೊರೆಯಲಿವೆ. ಹಿಂದೂ ಕೋಡ್ ಬಿಲ್ ತರುವ ಮೊದಲು ಹೆಣ್ಣು ಮಕ್ಕಳಿಗೆ ಮತದಾನದ ಅವಕಾಶವೂ ಇರಲಿಲ್ಲ. ಬಾಬಾ ಸಾಹೇಬರು ಅವರ ಶಕ್ತಿ, ಯೋಚನೆ ಹಾಗೂ ಚಿಂತನೆಯಿಂದ ಹೆಣ್ಣು ಮಕ್ಕಳಿಗೆ ಮತದಾನದ ಅವಕಾಶ ಸಿಕ್ಕಿತು. ನಾರೀಶಕ್ತಿ ಮಸೂದೆ ಮೂಲಕ ಕಾನೂನು ರಚನೆಯಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ಸಿಗಲಿದೆ ಎಂದರು.
ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ನವರು ಯಾವುದೇ ಅಪಸ್ವರ ಎತ್ತದೆ ಅಂಗೀಕಾರಕ್ಕೆ ಸಹಕರಿಸಲಿದ್ದಾರೆ ಎಂಬ ವಿಶ್ವಾಸ ಇದೆ. ಒಂದು ವೇಳೆ ಅಪಸ್ವರ ತೆಗೆದರೆ ಅವರ ಭವಿಷ್ಯ ಗಂಭೀರವಾಗುತ್ತದೆ ಎಂದು ಎಚ್ಚರಿಸಿದರು. ಈ ಮಸೂದೆಯನ್ನು ಪಕ್ಷದ ಪರವಾಗಿ ಸ್ವಾಗತಿಸುತ್ತೇವೆ. ದೇಶದಲ್ಲಿನ ನಾರೀಶಕ್ತಿ ಅಂಬೇಡ್ಕರ್ ಅವರಿಗೆ ಹೇಗೆ ಕೃತಜ್ಞತೆ ಹೊಂದಿದ್ದಾರೋ ಹಾಗೇಯೇ ಮೋದಿಜಿಯವರಿಗೂ ಕೃತಜ್ಞತೆ ವ್ಯಕ್ತಪಡಿಸಲಿದ್ದಾರೆ ಎಂದು ನುಡಿದರು.



