ವಿಜಯಸಾಕ್ಷಿ ಸುದ್ದಿ, ಗದಗ: ಗಣೇಶ ಚತುರ್ಥಿಯ ಅಂಗವಾಗಿ ನಗರದ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಮೆರವಣಿಗೆ ವೈಭವದಿಂದ ಜರುಗಿತು.
ನಗರದ ಮಸಾರಿ ಭಾಗದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಟ್ರಸ್ಟ್ ಕಮಿಟಿ ಸದಸ್ಯರು, ಭಕ್ತರು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡರು. ಸಾಂಪ್ರದಾಯಿಕ ಉಡುಪು ಧರಿಸಿದ್ದ ಮಹಿಳೆಯರು ಹಾಗೂ ಯುವಕರು ಮಂಗಳವಾದ್ಯಗಳ ಮಧುರ ನಾದಕ್ಕೆ ಹೆಜ್ಜೆ ಹಾಕಿದರು. ಭಜನೆ, ಮೆಲೋಡಿ ಹಾಗೂ ಭಕ್ತಿಗೀತೆಗಳ ಗಾಯನದ ನಡುವೆ ‘ಗಣಪತಿ ಬಪ್ಪಾ ಮೋರಯಾ, ಮಂಗಳಮೂರ್ತಿ ಮೋರಯಾ’ ಎಂಬ ಜಯಘೋಷಗಳು ಮೊಳಗಿದವು.
ಮೆರವಣಿಗೆಯುದ್ದಕ್ಕೂ ಯುವಕರು ಬಣ್ಣಬಣ್ಣದ ಗುಲಾಲ್ ಎರಚಿ ಕುಣಿದು ಕುಪ್ಪಳಿಸುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಿದರು. ಭಕ್ತಿಭಾವ ಹಾಗೂ ಸಡಗರದ ವಾತಾವರಣದಲ್ಲಿ ಮೆರವಣಿಗೆ ಸಾಗಿತು.
ನಂತರ ಶ್ರೀ ಗಣೇಶ ಮೂರ್ತಿಯನ್ನು ನಿಗದಿಪಡಿಸಿದ ಎಪಿಎಂಸಿ ಆವರಣದ ಸಾರ್ವಜನಿಕ ಮಂಟಪಕ್ಕೆ ಕರೆತರಲಾಯಿತು. ವೈದಿಕ ಮಂತ್ರೋಚ್ಚಾರಣೆಗಳೊಂದಿಗೆ ಶಾಸ್ತ್ರೋಕ್ತವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ಅಧ್ಯಕ್ಷ ತಿಮ್ಮರೆಡ್ಡಿ ಕೋನರೆಡ್ಡಿ, ಗೌರವ ಅಧ್ಯಕ್ಷ ಪ್ರಮೋದ್ ಆರ್. ವಾರಕರ, ಕಾರ್ಯದರ್ಶಿ ರಾಜಶೇಖರ ಬಿ. ಮುಧೋಳ, ಉಪಾಧ್ಯಕ್ಷ ರಾಜು ಎನ್. ಮೂಲೀಮನಿ, ಸಹಕಾರ್ಯದರ್ಶಿ ಚಂದ್ರಕಾಂತ ಬಿ. ಸವದತ್ತಿ, ಖಜಾಂಚಿ ಮಹೇಶ ಜಿ. ಗಾಣಿಗೇರ, ವಿನಾಯಕ ಪಿ. ವಜೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಈ. ಬಾಳಿಕಾಯಿ, ಗಿರೀಶ ವಿ. ಅಳವಂಡಿ, ದಯಾನಂದ ದುಂಡಪ್ಪನವರ, ಮುರಗೇಶ ಬಡ್ನಿ, ಅಜೀತ್ ಪುಣೇಕರ, ವಿನೂತ್ ಕವಲೂರ, ಸಾಗರ ವಜ್ರೇಶ್ವರಿ, ಮಂಜುನಾಥ ಬೇಲೆರಿ, ನಿಕೀಲ್ ದನ್ನೂರಮಠ, ಬಸವರಾಜ ಹರ್ತಿ, ಪ್ರಕಾಶ ಉಗಲಾಟದ, ಪ್ರದೀಪ್ ಆಸಂಗಿ, ಶರತ್ ಅಂಗಡಿ ಹಾಗೂ ಪ್ರಮೋದ್ ಬಳಗಾನೂರ ಸೇರಿದಂತೆ ದಲಾಲ ವರ್ತಕರ ಸಂಘ ಹಾಗೂ ಖರೀದಿ ವರ್ತಕರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.



