ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಬಿಡದಿ ವಿಚಾರವನ್ನು ಡೈವರ್ಟ್ ಮಾಡಲು ಜೈಲುಗಳ ಮೇಲೆ ದಾಳಿ ನಡೆಸಿಲ್ಲ. ರಾಜ್ಯದ ಹಲವು ಜೈಲುಗಳ ಮೇಲೆ ದಾಳಿ ನಡೆಸಿದ್ದೇವೆ. ನಾನು ಕೇವಲ ನಾಲ್ಕು ಸೆಲ್ಗಳ ಗೃಹ ಸಚಿವನಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಜೈಲುಗಳ ಮೇಲೆ ದಾಳಿ ನಡೆಸಿದ್ದೇವೆ. ಅದನ್ನೂ ಮಾಡಬಾರದಾ ಎಂದು ಪ್ರಶ್ನಿಸಿದರು. ಜೈಲಿನಿಂದ ಪ್ರಜ್ವಲ್ ರೇವಣ್ಣ ನಿರಂತರವಾಗಿ ಫೋನ್ನಲ್ಲಿ ಮಾತನಾಡಿರುವ ವಿಚಾರ ಪ್ರಸ್ತಾಪಿಸಿದ ಅವರು, “ಅವರು ಯಾರಿಗೆ ಮಾತನಾಡಿದ್ದಾರೆ? ಇಷ್ಟೆಲ್ಲ ಮಾತನಾಡುವವರು ಯಾಕೆ ಮಾಹಿತಿ ನೀಡಿಲ್ಲ? ಕುಟುಂಬದವರೊಂದಿಗೆ ತಾನೇ ಅವರು ಮಾತನಾಡಿದ್ದು” ಎಂದರು.
ಹಾಸನದಲ್ಲಿ ನಡೆದ ಘಟನೆಗಳ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ನೊಂದ ಕುಟುಂಬಗಳ ಕ್ಷೇಮ ವಿಚಾರಿಸುವುದು ಮೊದಲು ಆಗಬೇಕು ಎಂದು ಹೇಳಿದರು. “ಹಾಸನದಲ್ಲಿ ಏನಾಗಿತ್ತು ಎಂಬುದರ ಬಗ್ಗೆ ಒಂದು ಬಾರಿಯಾದರೂ ಮಾತನಾಡಿದ್ದಾರಾ? ಮೊದಲು ಆ ಕುಟುಂಬಗಳ ಕ್ಷಮೆ ಕೇಳಬೇಕು. ನೊಂದ ಮಹಿಳೆಯರ ಕ್ಷೇಮ ವಿಚಾರಿಸಬೇಕು” ಎಂದು ಹೇಳಿದರು.
ವಿಜಯದಶಮಿಯಿಂದ ಯುದ್ಧ ಆರಂಭವಾಗಲಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಅವರು, “ಅಲ್ಲೋಲ-ಕಲ್ಲೋಲ ಆಗೋದು ಮುಂದಕ್ಕೆ ಹೋಯ್ತಾ?” ಎಂದು ಪ್ರಶ್ನಿಸಿದರು.
ತಮ್ಮ ಕುಟುಂಬವನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೂ ತಿರುಗೇಟು ನೀಡಿದ ಅವರು, “ಯಾರು ಪ್ರಯತ್ನ ಮಾಡುತ್ತಿದ್ದಾರೆ? ನಾವ್ಯಾಕೆ ಅದನ್ನು ಮಾಡೋಣ?” ಎಂದು ಪ್ರಶ್ನಿಸಿದರು.
ಟಿ. ನರಸೀಪುರ ಇನ್ಸ್ಪೆಕ್ಟರ್ ವಿರುದ್ಧದ ಹಳೆಯ ಪ್ರಕರಣದ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಅವರ ವಿರುದ್ಧ ಇಲಾಖೆ ವಿಚಾರಣೆ ಆಗಿರಬೇಕು. ಅದಕ್ಕೂ ಗಣೇಶೋತ್ಸವದ ವಿಚಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಗಣೇಶೋತ್ಸವಕ್ಕೆ ಸಂಬಂಧಿಸಿದ ಇಲಾಖೆಯ ಎಸ್ಒಪಿ ಕುರಿತು ಮಾತನಾಡಿದ ಅವರು, ಆರೋಪಗಳಿದ್ದರೆ ದೂರು ನೀಡಲಿ, ತನಿಖೆ ನಡೆಸಲಾಗುವುದು ಎಂದರು.
ಗಣೇಶೋತ್ಸವವನ್ನು ಎಲ್ಲರೂ ವಿಜೃಂಭಣೆಯಿಂದ ಆಚರಿಸಬೇಕು. ಆದರೆ ಒಂದು ಸಮುದಾಯದ ಸಂಭ್ರಮ ಮತ್ತೊಬ್ಬರಿಗೆ ಆತಂಕ ಉಂಟುಮಾಡಬಾರದು ಎಂದು ಮನವಿ ಮಾಡಿದರು. “ಇವರಿಗೆ ಬೆಂಕಿ ಹಚ್ಚೋದೇ ಕೆಲಸ” ಎಂದು ಇದೇ ವೇಳೆ ಟೀಕಿಸಿದರು.
ಉಮರ್ ಖಾಲಿದ್ ಅವರನ್ನು ರಾಷ್ಟ್ರೀಯವಾದಿ ಎಂದು ಬಿಂಬಿಸುವ ವಿಚಾರದ ಕುರಿತು ಮಾತನಾಡಿದ ಅವರು, ಉಮರ್ ಖಾಲಿದ್ ಎಷ್ಟು ದಿನದಿಂದ ಜೈಲಿನಲ್ಲಿದ್ದಾನೆ ಎಂಬುದನ್ನು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಆತನ ವಿಚಾರಣೆಯನ್ನು ನಡೆಸಿ ನ್ಯಾಯಾಲಯದ ಮೂಲಕ ತೀರ್ಪು ಹೊರಬರಲು ಅವಕಾಶ ನೀಡಬೇಕು ಎಂದರು.
ಟ್ರಯಲ್ ನಡೆಸಿ ಕೋರ್ಟ್ ತೀರ್ಪು ನೀಡಲಿ. ಆಗ ಆತ ಅಪರಾಧಿಯೇ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿ ಹೇಳಿದರೆ ನಾವು ಒಪ್ಪಿಕೊಳ್ಳಬೇಕಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ರಾಜ್ಯದ ಎಲ್ಲ ಜೈಲುಗಳ ಮೇಲೂ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ನಾನು ಕೇವಲ ನಾಲ್ಕು ಸೆಲ್ಗಳ ಗೃಹ ಸಚಿವನಲ್ಲ.
ಪ್ರಿಯಾಂಕ್ ಖರ್ಗೆ, ಗೃಹ ಸಚಿವ



