ವಿಜಯಸಾಕ್ಷಿ ಸುದ್ದಿ, ಡಂಬಳ: ಮಾಜಿ ಸಚಿವ ಕಳಕಪ್ಪ ಬಂಡಿ ಅವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ನೀರಾವರಿ ಹಾಗೂ ಮೂಲಸೌಕರ್ಯ ಕ್ಷೇತ್ರಗಳಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದು ಬಿಜೆಪಿ ಡಂಬಳ ಮಂಡಳ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮಲ್ಲಪ್ಪ ಮಠದ ಹೇಳಿದರು.
ಕಳಕಪ್ಪ ಬಂಡಿ ಅವರ 58ನೇ ಜನ್ಮದಿನದ ಅಂಗವಾಗಿ ಡಂಬಳ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ, ಆವರಣದಲ್ಲಿ ಸಸಿ ನೆಟ್ಟು ಹಾಗೂ ಅಂಗನವಾಡಿ ಮಕ್ಕಳಿಂದ ಕೇಕ್ ಕತ್ತರಿಸಿ ಹಣ್ಣು ಹಂಪಲ ವಿತರಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಪ್ಪ ಮಠದ, ಗಜೇಂದ್ರಗಡ, ಮುಂಡರಗಿ ಹಾಗೂ ರೋಣ ಪಟ್ಟಣಗಳ ಅಭಿವೃದ್ಧಿಗೂ ಕಳಕಪ್ಪ ಬಂಡಿ ಅವರ ಕೊಡುಗೆ ಇದೆ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಭೀರಪ್ಪ ಬಂಡಿ, ಮುಖಂಡರಾದ ನಾಗರಾಜ ಕಾಟರಳ್ಳಿ ಹಾಗೂ ಉಮೇಶ ಅಂಕದ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಣ ಕ್ಷೇತ್ರಕ್ಕೆ ಶಿಕ್ಷಣ, ಕಾಲೇಜು, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ದೊರಕಿಸುವಲ್ಲಿ ಕಳಕಪ್ಪ ಬಂಡಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಯುವ ಮುಖಂಡರಾದ ಪ್ರಕಾಶ ಕೋತಂಬ್ರಿ ಹಾಗೂ ಶಿವಾನಂದ ಬಂಡಿ ಮಾತನಾಡಿ, ರೈತರು, ಬಡವರು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸಿದ ಕಳಕಪ್ಪ ಬಂಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಗ್ರಾಮಗಳಿಗೆ ಅನುದಾನ ಕಲ್ಪಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೆ.ಕೆ. ಬಂಡಿ, ಹನಮಂತಪ್ಪ ಹಾದಿಮನಿ, ರವಿ ಕರಿಗಾರ, ಬಸವರಾಜ ಸಂಗನಾಳ, ಗವಿಯಪ್ಪ ಮಠದ, ಪುಂಡಲೀಕ ಪಾರಪ್ಪನವರ, ಪ್ರಜ್ವಲ ಮಾನೆ, ಶ್ರೀಧರ ಬಂಡಿ, ಹನಮಪ್ಪ ಬಂಡಿ, ಫಕೀರಪ್ಪ ಬಿಸಾಟಿ, ಮುದಕಪ್ಪ ಮುಳಗುಂದ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.



