ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ತೋಂಟದ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯ ವಾಯ್.ಎಸ್. ಮತ್ತೂರ ಅವರು ಸಸಿಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, “ಏಷ್ಯಾದಲ್ಲೇ ಅತ್ಯಂತ ಶುದ್ಧ ಗಾಳಿ ಇರುವ ಪ್ರದೇಶಗಳಲ್ಲಿ ಗದಗ ಸುತ್ತಮುತ್ತಲಿನ ಪರಿಸರವೂ ಒಂದು. ಇದಕ್ಕೆ ಪ್ರಮುಖ ಕಾರಣ ಕಪ್ಪತ್ತಗುಡ್ಡ. ಕಪ್ಪತ್ತಗುಡ್ಡವನ್ನು ಖಾಸಗಿ ಕಂಪನಿಗಳಿಂದ ನಾಶವಾಗದಂತೆ ಹಗಲು-ರಾತ್ರಿ ಉಪವಾಸ ಸತ್ಯಾಗ್ರಹ ನಡೆಸಿ ಸಂರಕ್ಷಿಸಿದ ಕೀರ್ತಿ ಪರಮಪೂಜ್ಯ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಗಳಿಗೆ ಸಲ್ಲುತ್ತದೆ,” ಎಂದು ಹೇಳಿದರು.
“ಭೂಮಿಯನ್ನು ತಾಯಿಯಂತೆ ಗೌರವಿಸುವುದು ಹಾಗೂ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಾವೆಲ್ಲರೂ ಪರಿಸರ ಉಳಿವಿಗಾಗಿ ಕೈಜೋಡಿಸಬೇಕು,” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಸಿ ನೆಟ್ಟು ಪರಿಸರ ಕಾಳಜಿ ಅಭಿಯಾನಕ್ಕೆ ಕೈಜೋಡಿಸಿದರು.



