ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಮಾಡಳ್ಳಿ ಗ್ರಾಮದದಲ್ಲಿ ಶ್ರೀ ಸಿದ್ಧಾರೂಡ ಜಾತ್ರಾಮಹೋತ್ಸವದ ಅಂಗವಾಗಿ ಬುಧವಾರ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ನಡುವೆ ಶ್ರೀ ಸಿದ್ದಾರೂಢರ ಮಹಾರಥೋತ್ಸವ ಜರುಗಿತು.
ಗ್ರಾಮದಲ್ಲಿ ಬೆಳಗಿನಿಂದಲೇ ಮಹಿಳೆಯರು, ಮಕ್ಕಳು ಹೊಸ ಉಡುಗೆ ತೊಟ್ಟು ತಂಡೋಪತಂಡವಾಗಿ ಶ್ರೀಮಠಕ್ಕೆ ಆಗಮಿಸಿದರು. ರಥಕ್ಕೆ ಉಡಿ ತುಂಬಿ, ಹೊಸ ವಸ್ತ್ರಾಭರಣಗಳನ್ನಿರಿಸಿ ಶೃದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿ ಕೃತಾರ್ಥರಾದರು. ಸಂಜೆ ಅಣ್ಣಿಗೇರಿಯ ದಾಸೋಹಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮತ್ತು ವರವಿ ಮೌನೇಶ್ವರದ ಮಠದ ಶ್ರೀ ವಿರುಪಾಕ್ಷೇಶ್ವರ ಸ್ವಾಮಿಗಳು ಸಾನ್ನಿಧ್ಯದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ರಥೋತ್ಸವ ನೆರವೇರಿತು. ಸೇರಿದ್ದ ಅಪಾರ ಭಕ್ತ ಸಮೂಹ ಭಕ್ತಿ-ಭಾವಗಳಿಂದ ಉತ್ತತ್ತಿ, ಹಣ್ಣುಗಳನ್ನು ತೇರಿಗೆ ಎಸೆದು ಜಯಘೋಷ ಮೊಳಗಿಸಿದರು. ಗುರುವಾರ ಕಡುಬಿನ ಕಾಳಗ ಹಾಗೂ ಕೌದಿ ಪಡೆಯೊಂದಿಗೆ ಜಾತ್ರಾಮಹೋತ್ಸವ ಮಂಗಲಗೊಳ್ಳುವದು.



