ವಿಜಯಸಾಕ್ಷಿ ಸುದ್ದಿ, ಗದಗ: ಶಿವ ಎಂದರೆ ಕೇವಲ ದೇವರ ಅಸ್ತಿತ್ವದ ಪ್ರಶ್ನೆಯಲ್ಲ. ಅದು ಮಂಗಳ ಸ್ವರೂಪವಾಗಿದ್ದು, ಸರ್ವರನ್ನು ಸಮಭಾವದಿಂದ ಕಾಣುವ ಸತ್–ಚಿತ್–ಆನಂದದ ಮೂಲ ಸ್ವರೂಪವಾಗಿದೆ. ಶಿವಾನುಭವ ಎಂದರೆ ಸತ್ಯ, ಸೌಂದರ್ಯ ಹಾಗೂ ಪ್ರಾಮಾಣಿಕತೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ ೨೮೧೦ನೇ ಶಿವಾನುಭವದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
೫೪ ವರ್ಷಗಳ ಹಿಂದೆ ತೋಂಟದಾರ್ಯ ಮಠದಲ್ಲಿ ಸಮಾನ ಮನಸ್ಕ ಯುವಕರು ಆರಂಭಿಸಿದ ಶಿವಾನುಭವ, ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಪ್ರತಿ ಸೋಮವಾರ ನಿರಂತರವಾಗಿ ನಡೆಯುತ್ತ ಬಂದಿದೆ. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ತೆರೆಮರೆಯಲ್ಲಿದ್ದ ಪ್ರತಿಭಾವಂತರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಶಿವಾನುಭವ ಮಾಡಿದೆ ಎಂದರು.
ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ತೋಂಟದಾರ್ಯ ಮಠದ ಪಟ್ಟಾಧಿಕಾರ ವಹಿಸಿಕೊಂಡ ಬಳಿಕ ಭಕ್ತರಲ್ಲಿ ‘ನಮ್ಮ ಮಠ’ ಎಂಬ ಭಾವನೆ ಮೂಡಿಸಿ, ಶ್ರೀಮಠವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ರೂಪಿಸಿದರು ಎಂದು ಸ್ಮರಿಸಿದರು.
ನಿವೃತ್ತ ಡಾ. ಅರ್ಜುನ ಗೋಳಸಂಗಿ ಅವರನ್ನು ‘ಕೆಸರಿನಲ್ಲಿ ಅರಳಿದ ಕಮಲ’ ಎಂದು ಬಣ್ಣಿಸಿದ ಶ್ರೀಗಳು, ಸಾಹಿತ್ಯ, ಸಂಸ್ಕೃತಿ, ಸಂಘಟನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಶ್ಲಾಘನೀಯ. ಅವರ ನಿವೃತ್ತ ಜೀವನ ಸುಖ–ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು.
ಸಿದ್ಧಲಿಂಗ ಶ್ರೀಗಳ ಪ್ರಗತಿಪರ ಚಿಂತನೆ ಸ್ಮರಣೆ
‘ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಪಟ್ಟಾಧಿಕಾರ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘ ಸ್ಥಾಪನೆ, ನೆನಪು’ ವಿಷಯ ಕುರಿತು ಉಪನ್ಯಾಸ ನೀಡಿದ ಅಣ್ಣಿಗೇರಿಯ ನಿಂಗಮ್ಮ ಹೂಗಾರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಎಸ್. ಹರ್ಲಾಪುರ, ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪ್ರಗತಿಪರ ಚಿಂತನೆ ಹಾಗೂ ಜೀವಪರ ಕಾಳಜಿ ಹೊಂದಿದ್ದರು.
ಎಲ್ಲರನ್ನೂ ತಮ್ಮವರೆಂಬ ಭಾವದಿಂದ ಅಪ್ಪಿಕೊಂಡು ಶ್ರೀಮಠದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಬೆಳೆಸಿದರು ಎಂದು ಹೇಳಿದರು.
ಗೌರವ ಅತಿಥಿ ಸಿದ್ದರಾಮಯ್ಯ ಪಂಚಾಕ್ಷರಯ್ಯ ಸಂಶಿಮಠ ಅವರು ತಮ್ಮ ತಂದೆ ಪಂಚಾಕ್ಷರಯ್ಯ ಸಂಶಿಮಠ ಹಾಗೂ ಶ್ರೀಮಠದ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು. ನಿರಂಜನ ಬುಳ್ಳಾ, ನಮಗಿರುವುದು ಒಂದೇ ಮಠ, ಅದು ತೋಂಟದಾರ್ಯ ಮಠ, ನಮಗಿರುವವರು ಒಬ್ಬರೇ ಸ್ವಾಮೀಜಿ, ಅವರೇ ತೋಂಟದ ಸಿದ್ಧರಾಮ ಸ್ವಾಮೀಜಿ ಎಂದರು. ಪ್ರಭುದೇವ ಹಿರೇಮಠ ಅವರು ಅಂದಿನ ಐತಿಹಾಸಿಕ ಘಟನೆಗಳನ್ನು ಸ್ಮರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಅರ್ಜುನ ಗೋಳಸಂಗಿ, ಗದಗ ಪರಿಸರಕ್ಕೆ ಬರಲು ಹುಲಕೋಟಿಯ ಹಿರಿಯರಾದ ಎಚ್.ಕೆ. ಪಾಟೀಲ, ಡಿ.ಆರ್. ಪಾಟೀಲ ಹಾಗೂ ಧತ್ತಪ್ಪಗೌಡ ಓದುಗೌಡ ಅವರೇ ಕಾರಣ ಎಂದರು. ಶ್ರೀಮಠದ ಒಡನಾಟದಿಂದ ತಮ್ಮ ವಿಚಾರಧಾರೆಯಲ್ಲಿ ಅಪಾರ ಬದಲಾವಣೆಯಾಗಿದೆ. ಶ್ರೀಮಠಕ್ಕೆ ತಾವು ಋಣಿಯಾಗಿದ್ದು, ಮುಂದೆಯೂ ಪ್ರತಿಯೊಂದು ಕಾರ್ಯದಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಚನ ಸಂಗೀತ, ಧರ್ಮಗ್ರಂಥ ಪಠಣ, ವಚನ ಚಿಂತನ ಹಾಗೂ ದಾಸೋಹ ಸೇವೆ ನಡೆಯಿತು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ವಿ. ಪುರದ ಸ್ವಾಗತಿಸಿದರು. ಶಿವಾನುಭವ ಸಮಿತಿ ಚೇರ್ಮನ್ ಡಾ. ರಮೇಶ ಮ. ಕಲ್ಲನಗೌಡರ ಕಾರ್ಯಕ್ರಮ ನಿರ್ವಹಿಸಿದರು.
ಶಿವಾನುಭವದಲ್ಲಿ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ದರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಹಾಗೂ ಅನುಭಾವಿಗಳು ಪಾಲ್ಗೊಂಡಿದ್ದರು.
“ಶಿವಾನುಭವ ಎಂದರೆ ಸತ್ಯ, ಸೌಂದರ್ಯ ಹಾಗೂ ಪ್ರಾಮಾಣಿಕತೆಯ ಅನುಭವ. ೫೪ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಶಿವಾನುಭವವು ಸಾಧಕರು ಹಾಗೂ ತೆರೆಮರೆಯಲ್ಲಿರುವ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುವ ಮಹತ್ವದ ವೇದಿಕೆಯಾಗಿದೆ. ಸಿದ್ಧಲಿಂಗ ಮಹಾಸ್ವಾಮಿಗಳ ಪ್ರಗತಿಪರ ಹಾಗೂ ಸಮಾಜಮುಖಿ ಚಿಂತನೆಗಳು ಸದಾ ಸ್ಮರಣೀಯ.”



