ವಿಜಯಸಾಕ್ಷಿ ಸುದ್ದಿ, ಗದಗ: ಶಿರಡಿ ಸಾಯಿಬಾಬಾ ಅವರು ಮಾನವೀಯತೆ, ಭಕ್ತಿ ಮತ್ತು ಆದರ್ಶ ಜೀವನದ ಸಂದೇಶಗಳನ್ನು ನೀಡಿ ಮನುಕುಲವನ್ನು ಉದ್ಧರಿಸಿದ ಮಹಾನ್ ದೇವಮಾನವರಾಗಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಬಳಗಾನೂರಿನ ಪೂಜ್ಯ ಶಿವಶಾಂತವೀರ ಶರಣರು ಹೇಳಿದರು.
ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ನಡೆದ ನೂತನ ಶ್ರೀ ಸಾಯಿ ಪ್ರಸಾದ ನಿಲಯ, ವೆಬ್ಸೈಟ್ ಹಾಗೂ ಡಾ. ಸಂಗಮನಾಥ ಶೆಟ್ಟರ ಕನ್ನಡಕ್ಕೆ ಅನುವಾದಿಸಿದ ‘ಶ್ರೀ ಶಿರಡಿ ಬಾಬಾ ಮಹಾತ್ಮೆ–ಸಂಕಲ್ಪ ಸಿದ್ಧಿ ವ್ರತ’ ಗ್ರಂಥ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಾಯಿಬಾಬಾ ಅವರ ಉದ್ದೇಶ ಸಾಮಾನ್ಯ ವ್ಯಕ್ತಿಯನ್ನು ಆದರ್ಶ ವ್ಯಕ್ತಿಯನ್ನಾಗಿ ರೂಪಿಸುವುದಾಗಿತ್ತು. ಜ್ಞಾನ, ಭಕ್ತಿ, ಸ್ಮರಣೆ ಹಾಗೂ ಜನೋಪಯೋಗಿ ಕಾರ್ಯಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂಬ ಸಂದೇಶವನ್ನು ಅವರು ಸಾರಿದರು. ಸುಖ-ದುಃಖಗಳು ದೇಹಕ್ಕೆ ಮಾತ್ರ ಸಂಬಂಧಿಸಿದ್ದು, ಆತ್ಮ ಸದಾ ಚೈತನ್ಯಸ್ವರೂಪಿಯಾಗಿರುತ್ತದೆ. ಆತ್ಮಚಿಂತನೆಯ ಮೂಲಕ ಬದುಕಿನಲ್ಲಿ ನೆಮ್ಮದಿ ಹಾಗೂ ಆತ್ಮವಿಕಾಸ ಸಾಧ್ಯ ಎಂದು ಹೇಳಿದರು.
ಗದಗಿನ ಸಾಯಿಬಾಬಾ ಮಂದಿರ ಜ್ಞಾನ ದಾಸೋಹ, ಭಕ್ತಿ ದಾಸೋಹ ಹಾಗೂ ಅನ್ನದಾಸೋಹದ ಮೂಲಕ ಸಾಯಿಬಾಬಾ ಅವರ ತತ್ವ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಡಾ. ಸಂಗಮನಾಥ ಶೆಟ್ಟರ ಅವರು ಸಂತಕವಿ ದಾಸಗಣು ಮಹಾರಾಜರ ಮರಾಠಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವುದು ಅಭಿನಂದನೀಯ ಕಾರ್ಯ ಎಂದರು.
ಗ್ರಂಥ ಪರಿಚಯಿಸಿದ ಡಾ. ಸಂಗಮನಾಥ ಶೆಟ್ಟರ, ಸಾಯಿಬಾಬಾ ಅವರ ತತ್ವಗಳಲ್ಲಿ ನಿಸ್ವಾರ್ಥ ಕರ್ತವ್ಯ, ದಾನ, ವಿನಯ ಹಾಗೂ ಆತ್ಮಶುದ್ಧಿಗೆ ವಿಶೇಷ ಮಹತ್ವ ನೀಡಲಾಗಿದೆ. ಭಕ್ತರ ಬೇಡಿಕೆಯ ಮೇರೆಗೆ ಪರಿಷ್ಕೃತ ದ್ವಿತೀಯ ಮುದ್ರಣವನ್ನು ದಾನಿಗಳ ಸಹಕಾರದಿಂದ ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ದತ್ತಾ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ ಪ್ರಕಾಶ ಭೂಮಾ ಮಾತನಾಡಿ, “ಸಬ್ ಕಾ ಮಾಲಿಕ್ ಏಕ್” ಎಂಬ ಸಾಯಿಬಾಬಾ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು, ಜಾತಿ-ಧರ್ಮ ಭೇದ ಮರೆತು ಮಾನವೀಯತೆಯಿಂದ ಬದುಕಬೇಕು ಎಂದು ಹೇಳಿದರು.
ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯಕ್ಷ ಮಹೇಶಗೌಡ ತಲೆಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಭಕ್ತರ ಸಹಕಾರ ಹಾಗೂ ದಾನಿಗಳ ಕೊಡುಗೆಯಿಂದ ಮಂದಿರದಲ್ಲಿ ಅನೇಕ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುಶೀಲಾ ಗಂಗಣ್ಣ ಕೋಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಾನಿಗಳು, ಸೇವಾಕರ್ತರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಕುಮಾರಿ ಕ್ಷೀತಿ ಅಶ್ವಥ್ ಸುಲಾಖೆ ಪ್ರಾರ್ಥಿಸಿದರು. ಡಾ. ಎಸ್.ಡಿ. ಯರಗೇರಿ ಕಾರ್ಯಕ್ರಮ ನಿರೂಪಿಸಿ, ಅಮೃತ ವಾಲಿ ವಂದಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
“ಸಾಯಿಬಾಬಾ ಪವಾಡಗಳನ್ನು ಮಾತ್ರ ಮಾಡಲಿಲ್ಲ; ಮಾನವೀಯತೆ, ಭಕ್ತಿ ಮತ್ತು ಆದರ್ಶ ಜೀವನದ ಮಾರ್ಗವನ್ನೂ ತೋರಿಸಿದರು.”
– ಪೂಜ್ಯ ಶಿವಶಾಂತವೀರ ಶರಣರು



