ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ವಿಧಾನಸಭೆ ಸ್ಪೀಕರ್ ನಾನಾ ಪಟೋಲೆ ಅವರ ಪಾದಗಳನ್ನು ಇಬ್ಬರು ಯುವಕರು ತೊಳೆದು ಪೂಜೆ ಸಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದರೆ, ಇದು ಗುರು ಪೂರ್ಣಿಮೆಯ ಸಂಪ್ರದಾಯದ ಭಾಗ ಎಂದು ನಾನಾ ಪಟೋಲೆ ಸ್ಪಷ್ಟನೆ ನೀಡಿದ್ದಾರೆ.
ವೈರಲ್ ವಿಡಿಯೋದಲ್ಲಿ ನಾನಾ ಪಟೋಲೆ ಸೋಫಾದಲ್ಲಿ ಕುಳಿತಿರುವಾಗ ಇಬ್ಬರು ಯುವಕರು ಅವರ ಪಾದಗಳನ್ನು ತೊಳೆದು, ಹೂವು ಹಾಗೂ ಹಣ್ಣುಗಳನ್ನು ಅರ್ಪಿಸಿ ಸಾಂಪ್ರದಾಯಿಕ ಗುರು ಪೂಜೆ ನಡೆಸುತ್ತಿರುವ ದೃಶ್ಯಗಳು ಕಾಣಿಸುತ್ತವೆ. ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ಬಿಜೆಪಿ ನಾಯಕರು ಇದನ್ನು ‘ವಿಐಪಿ ಸಂಸ್ಕೃತಿ’ ಎಂದು ಟೀಕಿಸಿದ್ದಾರೆ.
ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬಾವಂಕುಳೆ ಪ್ರತಿಕ್ರಿಯಿಸಿ, ಇಂತಹ ದೃಶ್ಯಗಳು ಕಾಂಗ್ರೆಸ್ ನಾಯಕರ ಮನೋಭಾವವನ್ನು ಪ್ರತಿಬಿಂಬಿಸುತ್ತವೆ. ಸಾರ್ವಜನಿಕ ಜೀವನದಲ್ಲಿರುವವರು ಇಂತಹ ವಿವಾದಾತ್ಮಕ ನಡೆಗಳಿಂದ ದೂರವಿರಬೇಕು ಎಂದು ವಾಗ್ದಾಳಿ ನಡೆಸಿದರು.
ಆದರೆ ಆರೋಪಗಳನ್ನು ತಳ್ಳಿಹಾಕಿರುವ ನಾನಾ ಪಟೋಲೆ, ಗುರು ಪೂರ್ಣಿಮೆಯಂದು ತಮ್ಮ ಕುಟುಂಬದ ಇಬ್ಬರು ಕಿರಿಯ ಸದಸ್ಯರು ತಮ್ಮನ್ನು ಗುರು ಎಂದು ಭಾವಿಸಿ ಸ್ವಯಂಪ್ರೇರಿತರಾಗಿ ಪಾದ ಪೂಜೆ ಮಾಡಿದರು. ಇದಕ್ಕೆ ನಾನು ಯಾರನ್ನೂ ಒತ್ತಾಯಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಬಿಜೆಪಿಗೆ ತಿರುಗೇಟು ನೀಡಿದ ಅವರು, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಉಪದೇಶ ನೀಡುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ ಎಂದು ಹೇಳಿದರು. ಶ್ರೀರಾಮ ಮಂದಿರ ದೇಣಿಗೆ ವಿಚಾರವನ್ನೂ ಉಲ್ಲೇಖಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿಡಿಯೋದಲ್ಲಿ ಕಾಣಿಸಿಕೊಂಡ ಅನಿಲ್ ಪಾಟೀಲ್ ಚಿಮೇಗಾಂವ್ಕರ್ ಹಾಗೂ ಮಾಧವರಾವ್ ಪವಳೆ ಕೂಡ ಪ್ರತಿಕ್ರಿಯಿಸಿ, ಪಟೋಲೆ ಅವರು ಪಾದ ಪೂಜೆ ಮಾಡಲು ಕೇಳಿರಲಿಲ್ಲ. ತಾವೇ ಗೌರವ ಮತ್ತು ನಂಬಿಕೆಯಿಂದ ಈ ಆಚರಣೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.



