ವಿಜಯಸಾಕ್ಷಿ ಸುದ್ದಿ, ಗದಗ
ಯಾರನ್ನೋ ಮೆಚ್ಚಿಸಲು ಹೋಗಿ ಸಂಚಾರಿ ಪೊಲೀಸರೊಬ್ಬರು ಬಡಪಾಯಿ ಆಟೋ ಡ್ರೈವರ್ ಮೇಲೆ ದರ್ಪ ಮೆರೆದ ಘಟನೆ ಗದಗನ ನಗರದಲ್ಲಿ ನಡೆದಿದೆ.
ಇಲ್ಲಿನ ಹತ್ತಿಕಾಳ ಕೂಟ (ಬಸವೇಶ್ವರ ಸರ್ಕಲ್) ಬಳಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಟ್ರಾಫಿಕ್ ಹೆಡ್ ಕಾನಸ್ಟೇಬಲ್ ಸತ್ಯರಡ್ಡಿ ಎಂಬುವರೇ ಆಟೋ ಡ್ರೈವರ್ ನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಪ್ರಶ್ನೆಸಿದರೆ ಆಟೋ ಸಮೇತ ಒಳಗೆ ಹಾಕಿಸುವ ಬೆದರಿಕೆ ಹಾಕಿದ್ದಾರೆ.
ನಿನ್ನೆ ಸಂಜೆ 7-30 ರ ಸುಮಾರಿಗೆ ಬಸವೇಶ್ವರ ಸರ್ಕಲ್ ಬಳಿ ದೊಡ್ಡ ಪ್ರಮಾಣದ ಗೂಡ್ಸ ಲಾರಿಯೊಂದು ರಸ್ತೆಗೆ ಅಡ್ಡವಾಗಿ ನಿಂತಿತ್ತು. ಅದರಲ್ಲಿದ್ದ ಕಿರಾಣಿ ಸಾಮಾನುಗಳನ್ನು ಅರಿಹಂತ ಟ್ರೇಡರ್ಸ್ ಅನ್ನೂ ಅಂಗಡಿಗೆ ಇಳಿಸಲಾಗುತ್ತಿತ್ತು. ಈ ವೇಳೆ ಟ್ರಾಫಿಕ್ ಜಾಮ್ ಆಗಿದೆ. ನಿತ್ಯವೂ ಸರ್ಕಲ್ ಬಳಿ ಗ್ರಾಮೀಣ ಭಾಗಕ್ಕೆ ಹೋಗುವ ಪ್ರಯಾಣಿಕರಿಗಾಗಿ ಆಟೋ, ಟಂ ಟಂ ನಿಲ್ಲಿಸಲಾಗುತ್ತೆ.
ಅದರಂತೆ ನಿನ್ನೆ ಸಂಜೆಯೂ ಕಳಸಾಪೂರ ಗ್ರಾಮದ ಸುಲೆಮಾನ್ ಎಂಬಾತ ತನ್ನ ಆಟೋ ನಿಲ್ಲಿಸಿಕೊಂಡು ಪ್ರಯಾಣಿಕರಿಗಾಗಿ ಕಾಯುತ್ತಿದ್ದ. ಈ ಸಂದರ್ಭದಲ್ಲಿ ಒಂದಿಷ್ಟು ಟ್ರಾಫಿಕ್ ಜಾಮ್ ಆಗಿದೆ. ಮೊದಲೇ ದೊಡ್ಡ ಲಾರಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿತ್ತು. ಇದರಿಂದ ಮತ್ತಷ್ಟು ಸಮಸ್ಯೆ ಆಗಿದೆ. ಆದರೆ ಲಾರಿ ಚಾಲಕನ ತಪ್ಪೋ ಅಥವಾ ಅಂಗಡಿ ಮಾಲೀಕನ ತಪ್ಪೋ ಅದನ್ನು ಗಮನಿಸದೆ ಸತ್ಯರಡ್ಡಿ ಸಾಹೇಬರು ಸೀದಾ ಬಂದವರೇ ಆಟೋ ಚಾಲಕ ಸುಲೇಮಾನ್ ಗೆ ಪಟಾರ್ ಅಂತ ಕಪಾಳಕ್ಕೆ ಹೊಡೆದಿದ್ದು ಅಲ್ಲದೇ, ನಾಲ್ಕೈದು ಏಟು ಬಾರಿಸಿದ್ದಾರೆ. ಇದು ಅಲ್ಲಿದ್ದ ಇತರ ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಟ್ರಾಫಿಕ್ ಜಾಮ್ ಇದೇ ಮೊದಲಲ್ಲ
ಬಸವೇಶ್ವರ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಆಗೋದು ಇದೇ ಮೊದಲಲ್ಲ. ಪ್ರತಿ ಸೋಮವಾರ, ಬುಧವಾರ ಹಾಗೂ ಶನಿವಾರ ಈ ಸಮಸ್ಯೆ ಉಂಟಾಗುತ್ತೆ. ಆದ್ರೂ ಪೊಲೀಸರು ಮಾತ್ರ, ದ್ವಿಚಕ್ರ ವಾಹನ ಸವಾರರ, ಆಟೋ ಚಾಲಕರ ಮೇಲೆ ಸವಾರಿ ಮಾಡಿ, ಗದರಿಸಿ ಅಂಗಡಿ ಮಾಲೀಕರ ಮೇಲೆ ಕರುಣೆ ತೋರಿಸುತ್ತಾರೆ. ಗೂಡ್ಸ ವಾಹನ, ಟಂ ಟಂ ವಾಹನಗಳ, ದೊಡ್ಡ ದೊಡ್ಡ ಲಾರಿಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವವರಿಗೆ ಪಾಠ ಕಲಿಸಬೇಕು. ಆದರೆ ಏಕಾಏಕಿ ಹಲ್ಲೆ ಮಾಡುವ, ಬಡವರ ಮೇಲೆ ದರ್ಪ ಮೆರೆಯುವು ಇಂತಹ ಪೊಲೀಸರ ಮೇಲೆ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.