ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾ ಆಲೂರು ಗ್ರಾಮದಲ್ಲಿ ಮಹಾಮಾರಿಯ ಆತಂಕ ಮನೆ ಮಾಡುತ್ತಿದೆ. ಇಲ್ಲಿ ಊರಿಗೆ ಊರೇ ರೋಗಗ್ರಸ್ಥವಾಗಿದೆ.
ಈ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಂದಿಬ್ಬರು ಜನರಾದರೂ ಜ್ವರದಿಂದ ಬಳಲುತ್ತಿದ್ದಾರೆ. ಈ ಗ್ರಾಮದಲ್ಲಿ 9 ಸಾವಿರ ಜನ ಸಂಖ್ಯೆ ಇದೆ. ಸದ್ಯ ಇಲ್ಲಿ 700ಕ್ಕೂ ಹೆಚ್ಚು ಜನರಲ್ಲಿ ಈ ನಿಗೂಢ ಜ್ವರ ಕಾಣಿಸಿಕೊಳ್ಳುತ್ತಿದೆ ಎಂಬ ಆತಂಕದ ಸಂಗತಿ ಬಹಿರಂಗವಾಗಿದೆ.

ಈ ಗ್ರಾಮದ ಜನರು ಸದ್ಯ ಕೊರೊನಾ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಲವರು ಏನೂ ಆಗಲ್ಲ ಎಂಬ ಧೈರ್ಯದ ಮಾತುಗಳನ್ನು ಹೇಳುತ್ತಿದ್ದಾರೆಯಾದರೂ ಭಯ ಇಡೀ ಊರನ್ನೇ ಆವರಿಸಿ ಬಿಟ್ಟಿದೆ.
ಈಗಾಗಲೇ ಈ ನಿಗೂಢ ಜ್ವರಕ್ಕೆ ಮೂರು ದಿನಗಳ ಅಂತರದಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಿಂದ ಗ್ರಾಮಕ್ಕೆ ಹಲವು ಕಾರ್ಮಿಕರು ಆಗಮಿಸಿದ್ದರು. ಅವರಿಂದಲೇ ಈ ಗ್ರಾಮದೊಳಗೆ ಕೊರೊನಾ ಹೊಕ್ಕಿತೇ ಎಂಬ ಆತಂಕ ಮನೆ ಮಾಡುತ್ತಿದೆ.
ಲಾಕ್ ಡೌನ್ ಹಾಗೂ ಜನತಾ ಕರ್ಫ್ಯೂ ಇದ್ದ ಕಾರಣ ಇಲ್ಲಿಯ ಗ್ರಾಮಸ್ಥರು ಆಸ್ಪತ್ರೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ, ದಿನದಿಂದ ದಿನಕ್ಕೆ ಮಾತ್ರ ಇಡೀ ಗ್ರಾಮ ಜ್ವರದಿಂದ ಆವರಿಸುತ್ತಿದೆ.

ದಿನದಿಂದ ದಿನಕ್ಕೆ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಗ್ರಾಮದ ಜನರು ಕೈ ಮುಗಿದು ವೈದ್ಯರಿಗೆ ಮನವಿ ಮಾಡುತ್ತಿದ್ದಾರೆ. ಕೂಡಲೇ ಬಂದು ಇಡೀ ಗ್ರಾಮವನ್ನೇ ಚೆಕ್ ಮಾಡಿ. ಚಿಕಿತ್ಸೆ ಕೊಡಿ ಎಂದು ಗ್ರಾಮಸ್ಥರು ಅಂಗಲಾಚುತ್ತಿದ್ದಾರೆ.