ವಿಜಯಸಾಕ್ಷಿ ಸುದ್ದಿ, ಲಕ್ನೊ
ಕೊರೊನಾ ಅಟ್ಟಹಾಸದ ಮಧ್ಯೆಯೂ ದೇಶದಲ್ಲಿ ಚುನಾವಣಾ ಆಯೋಗ ಮತದಾನ ನಡೆಸಿದೆ. ಆದರೆ, ಕೆಲಸಕ್ಕೆ ಹಾಜರಾಗಿದ್ದ ಸುಮಾರು 2 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಸಾವನ್ನಪ್ಪಿರುವ ಆಘಾತಕಾರಿ ವಿಷಯ ಬಹಿರಂಗವಾಗಿದೆ.
ಸತ್ತವರ ಪೈಕಿ 700ಕ್ಕೂ ಹೆಚ್ಚು ಜನರು ಶಿಕ್ಷಕರಿದ್ದಾರೆ ಎಂದು ತಿಳಿದು ಬಂದಿದೆ. ಕೊರೊನಾ ಹಾವಳಿಯ ಮಧ್ಯೆಯೂ ಉತ್ತರ ಪ್ರದೇಶದಲ್ಲಿ ಪಂಚಾಯತಿ ಚುನಾವಣೆ ನಡೆದಿದೆ. ಆದರೆ, ಈ ಚುನಾವಣೆ ಕೆಲಸಕ್ಕೆ ಹಾಜರಾಗಿದ್ದ ಬಹುತೇಕ ನೌಕರರು ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 706 ಜನ ಶಿಕ್ಷಕರು ಬಲಿಯಾಗಿದ್ದಾರೆ. ಅಲ್ಲದೇ, ಈ ಸಂಖ್ಯೆ ಸಾವಿರದ ಗಡಿ ದಾಟುವ ಆತಂಕ ಶಿಕ್ಷಣ ಇಲಾಖೆಯದ್ದಾಗಿದೆ.
ಉತ್ತರ ಪ್ರದೇಶದ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ದಿನೇಶ್ ಚಂದ್ರ ಶರ್ಮಾ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ 10 ಪುಟಗಳ ದೀರ್ಘವಾದ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ, ಜಿಲ್ಲಾವಾರು ಶಿಕ್ಷಕರ ಮಾಹಿತಿಯನ್ನು ಕೂಡ ಸಿಎಂಗೆ ನೀಡಲಾಗಿದೆ. ಕಳೆದ ಒಂದು ವಾರದಿಂದ ಶಿಕ್ಷಕರ ಮರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಮುಖ್ಯ ಕಾರಣವೇ ಚುನಾವಣೆಯ ಕೆಲಸ. ಕೂಡಲೇ ಸರ್ಕಾರ ಮೃತ ಕುಟುಂಬಗಳಿಗೆ ರೂ. 50 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಸರ್ಕಾರಿ ನೌಕರರು ಕಚೇರಿಗಳಿಗೆ ಆಗಮಿಸುತ್ತಿಲ್ಲ. ಹಲವರು ಸ್ವಯಂ ಕ್ವಾರಂಟೈನ್ ನಲ್ಲಿದ್ದಾರೆ. ಇದರಿಂದಾಗಿ ದೇಶದ ಜನರೇ ಬೆಚ್ಚಿ ಬಿದ್ದಿದ್ದಾರೆ.