ವಿಜಯಸಾಕ್ಷಿ ಸುದ್ದಿ, ಗದಗ
ಗದಗ ಜಿಲ್ಲೆಯಲ್ಲಿ ಕಳ್ಳರು ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ಹಲವು ತಿಂಗಳಿಂದ ಯಾವುದೇ ಕಳ್ಳತನ ಪ್ರಕರಣಗಳು ನಡೆದಿರಲಿಲ್ಲ. ಆದರೆ ಕಳೆದ ಹದಿನೈದು ದಿನಗಳಲ್ಲಿ ಜಿಲ್ಲೆಯಲ್ಲಿ ಎರಡು ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಈಗ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಮೊನ್ನೆ ಗದಗ ನಗರದಲ್ಲಿ ದೊಡ್ಡಮಟ್ಟದಲ್ಲಿ ಮನೆಗಳ್ಳತನ ಪ್ರಕರಣ ನಡೆದಿದೆ. ಗದಗನ ಕೇಶವನಗರದಲ್ಲಿನ ಸಜ್ಜನ ಕಾಲೋನಿಯ ನಿವಾಸಿ, ಮನೆ ಕಟ್ಟಿ ಮಾರಾಟ ಮಾಡುವ ವೆಂಕಟೇಶ ಮುಂಬಾರಡ್ಡಿ ಎಂಬುವವರ ಮನೆ ಕಳ್ಳತನವಾಗಿದ್ದು, ಬಡಾವಣೆಯ ಜನತೆಯಲ್ಲಿ ತೀವ್ರ ಆತಂಕ ಮೂಡಿಸಿದೆ.
ಹಾಡುಹಗಲೇ ಮನೆಯ ಹಿಂಬಾಗಿಲನ್ನು ಮುರಿದು ಒಳಹೊಕ್ಕ ಕಳ್ಳರು, ಅಲ್ಮೇರಾದಲ್ಲಿನ ಲಕ್ಷಾಂತರ ರೂ. ಮೌಲ್ಯದ ಆಭರಣ ಕಳ್ಳತನ ಮಾಡಿದ್ದಾರೆ. ಶುಕ್ರವಾರ ಕಾರ್ಯನಿಮಿತ್ತ ಕುಟುಂಬ ಸಮೇತ ಬೇರೆ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
4ಲಕ್ಷ 55 ಸಾವಿರ ರೂ. ಮೌಲ್ಯದ 91 ಗ್ರಾ. ಚಿನ್ನಾಭರಣ, ನಗದು 1ಲಕ್ಷ 70 ಸಾವಿರ ರೂ ಖದೀಮರು ದೋಚಿ ಪರಾರಿಯಾಗಿದ್ದಾರೆ.
ಶುಕ್ರವಾರ ಸಂಜೆ ಮನೆಗೆ ಬಂದು ನೋಡಿದ ಮುಂಬಾರಡ್ಡಿ ಅವರಿಗೆ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.