ವಿಜಯಸಾಕ್ಷಿ ಸುದ್ದಿ, ಗದಗ:
ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಜನರು ಕಂಗೆಟ್ಟಿದ್ದಾರೆ. ರೋಣ ತಾಲೂಕಿನ ಮೇಗೂರು ಗ್ರಾಮದಲ್ಲಿಯೂ ವರುಣರಾಯನ ಆರ್ಭಟದಿಂದ ಸಾಕಷ್ಟು ಕಷ್ಟನಷ್ಟಗಳನ್ನು ಸಂಭವಿಸುತ್ತಿದೆ. ಸಾರ್ವಜನಿಕರು ಮಳೆಯ ಪರಿಣಾಮವಾಗಿ ಶನಿವಾರ ನಸುಕಿನಲ್ಲಿ ಮೇಗೂರಿನ ಶಿವಾನಂದ ಅರಹುಣಸಿ ಎಂಬುವರ ಮನೆಯ ಛಾವಣಿ ಸಂಪೂರ್ಣ ನೆಲಕಚ್ಚಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಶಿವಾನಂದ ಅರಹುಣಸಿ ಎಂಬುವರ ಮನೆಯೊಳಗೆ ರಾತ್ರಿ ಕುಟುಂಬದ ಏಳು ಸದಸ್ಯರು ಮಲಗಿ ನಿದ್ರಿಸಿದ್ದರು. ನಸುಕಿನ ವೇಳೆಯಲ್ಲಿ ದೊಡ್ಡದಾದ ಸದ್ದು ಕೇಳಿಬರತೊಡಗಿತು. ಏಕಾಏಕಿ ಕೇಳಿಬಂದ ಶಬ್ಧ ಎಲ್ಲಿಂದ, ಏನು ಎಂದೂ ಯೋಚಿಸದೇ ತಕ್ಷಣ ಮನೆಯಿಂದ ಹೊರಭಾಗಕ್ಕೆ ಬಂದು ನಿಂತಿದ್ದು ನೋಡನೋಡುತ್ತಿದ್ದಂತೆ ಇಡೀ ಮನೆಯ ಮೇಲ್ಛಾವಣಿ ಕುಸಿದು ನೆಲಕ್ಕೆ ಬಿದ್ದಿದೆ ಎನ್ನಲಾಗಿದೆ. ತಕ್ಷಣ ಎಚ್ಚೆತ್ತು ಸ್ಥಳದಿಂದ ಹೊರಕ್ಕೆ ಬಂದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಛಾವಣಿ ಕುಸಿದ ಪರಿಣಾಮವಾಗಿ ಲಕ್ಷಾಂತರ ರೂ. ಮೌಲ್ಯದ ಅಡುಗೆ ಸಾಮಗ್ರಿ ಹಾಗೂ ಇನ್ನಿತರೇ ವಸ್ತುಗಳು ಹಾನಿಗೊಂಡಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಜಿ.ಪಂ ಸದಸ್ಯ ಶಿವಕುಮಾರ ನೀಲಗುಂದ ಸ್ಥಳಕ್ಕೆ ಆಗಮಿಸಿ ಹಾನಿಯನ್ನು ಪರಿಶೀಲಿಸಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.