ವಿಜಯಸಾಕ್ಷಿ ಸುದ್ದಿ, ಹರಿಯಾಣ
ಅನಾರೋಗ್ಯದಿಂದ ಬಳಲುತ್ತಿದ್ದ 7 ವರ್ಷದ ಮಗು ಸತ್ತಿದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಭಾರದ ಹೃದಯ ಹೊತ್ತ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಆ ನಂತರ ನಡಿದಿದ್ದೇ ಪವಾಡ!
ಈ ಸಂದರ್ಭದಲ್ಲಿ ಹೆತ್ತಮ್ಮನ ಗೋಳಾಟ ಮುಗಿಲು ಮುಟ್ಟಿತ್ತು. ‘ಮಗನೇ ಒಮ್ಮೆ ಕಣ್ಣುಬಿಡಪ್ಪಾ, ನಿನ್ನ ದಮ್ಮಯ್ಯ… ನನ್ನ ಬಿಟ್ಟು ಹೋಗ್ಬೇಡಾ…’ ಎಂದು ಕಂದನ ದೇಹವನ್ನು ಅಲ್ಲಾಡಿಸುತ್ತಾ ಗೋಗರೆಯುತ್ತಿದ್ದಳು. ತಾಯಿಯ ಕರುಳ ಕೂಗು ಆ ದೇವರಿಗೆ ಕೇಳಿಸಿರಬೇಕು ಅನ್ನಿಸುತ್ತೆ, ಶವವಾಗಿ ಮಲಗಿದ್ದ ಮಗುವಿನ ದೇಹದಲ್ಲಿ ದಿಢೀರ್ ಚಲನೆ ಕಂಡುಬಂದಿರುವುದು ಒಂದು ಪವಾಡವೇ ಎಂದು ಹೇಳಬಹುದು.
ಹರಿಯಾಣದ ಜಜ್ಜಾರ್ ಜಿಲ್ಲೆಯ ಹಿತೇಶ್ ಎಂಬುವವರ ಮಗ ಕುನಾಲ್ ಶರ್ಮಾನಿಗೆ ಕಳೆದ ತಿಂಗಳು ಟೈಫಾಯಿಡ್ ಜ್ವರ ಕಾಣಿಸಿಕೊಂಡಿತ್ತು. ತೀವ್ರ ಅಸ್ವಸ್ಥನಾಗಿದ್ದ ಕುನಾಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 26ರಂದು ಮಗು ಮೃತಪಟ್ಟಿದೆ ಎಂದು ದೆಹಲಿ ವೈದ್ಯರು ಘೋಷಿಸಿದ್ದರು.
ಪಾಲಕರು 7 ವರ್ಷದ ಮಗುವನ್ನು ಕಳೆದುಕೊಂಡ ನೋವಿನಲ್ಲಿ ಕಣ್ಣೀರು ಹಾಕುತ್ತಲೇ ಸ್ವಗ್ರಾಮಕ್ಕೆ ಮೃತದೇಹ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಅಂತಿಮ ವಿಧಿವಿಧಾನ ಮಾಡಿಸುವ ವೇಳೆಯಲ್ಲಿ ದೂರದೂರಲ್ಲಿದ್ದ ಕುನಾಲ್ ನ ಅಜ್ಜಿ, ಮೊಮ್ಮಗನ ಅಂತಿಮ ದರ್ಶನ ಪಡೆಯಬೇಕೆಂದು ಹಠ ಹಿಡಿದಿದ್ದರಿಂದ ಅವರಿಗಾಗಿ ಸ್ವಲ್ಪ ಸಮಯ ಎಲ್ಲರೂ ಕಾಯುತ್ತಿದ್ದರು. ಆದರೆ ಅವರು ಬರುವಷ್ಟರಲ್ಲಿ ಶವವಾಗಿದ್ದ ಮಗು ಬದುಕಿಬಂದ ಪವಾಡವೇ ನಡೆದು ಹೋಗಿದೆ.
ಹೆತ್ತ ಮಗನನ್ನ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ‘ಎದ್ದೇಳಪ್ಪಾ… ಕಂದಾ… ಅಮ್ಮನ ಮುಖ ನೋಡೋ…’ ಎಂದು ಮಗನ ದೇಹವನ್ನೆಲ್ಲ ಸವರುತ್ತಾ ಎಳೆದಾಡಿದ್ದಾಳೆ. ಆ ವೇಳೆ ಮಗ ಕುನಾಲ್ ದೇಹದಲ್ಲಿ ಚಲನೆ ಕಂಡು ಬಂದಿದ್ದು, ಕೂಡಲೇ ತಂದೆ ಹಿತೇಶ್, ಮಗುವಿನ ಮೇಲೆ ಹಾಕಿದ್ದ ಬಟ್ಟೆ ತೆಗೆದು ಬಾಯಿಗೆ ಬಾಯಿ ಇಟ್ಟು ಉಸಿರು ಕೊಟ್ಟರು. ಆಗ ಮಗನ ದೇಹದಲ್ಲಿ ಮತ್ತಷ್ಟು ಮತ್ತಷ್ಟು ಚಲನ ಕಂಡು ಬಂದಿದ್ದು, ಎದೆಯ ಬಡಿತವೂ ಶುರುವಾಯಿತು.
ಕೂಡಲೇ ಕುಟುಂಬಸ್ಥರು ಮಗು ಎತ್ತಿಕೊಂಡು ಪಾಲಕರು ಸಮೀಪದ ಖಾಸಗಿ ಆಸ್ಪತ್ರೆಗೆ ಓಡಿ ಬಂದಿದ್ದಾರೆ. ಮಗು ಬದುಕುವ ಸಾಧ್ಯತೆ ಶೇ.15 ಮಾತ್ರ ಎಂದು ಹೇಳಿದ್ದರು. 20 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ಜೂ. 15 ರಂದು ಸಂಪೂರ್ಣ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.