ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯದಾದ್ಯಂತ ಕೊರೊನಾ ಮಹಾಮಾರಿಯ ಅಟ್ಟಹಾಸ ಮಿತಿ ಮೀರುತ್ತಿದೆ. ಹೀಗಾಗಿ ಸರ್ಕಾರ ಲಾಕ್ ಡೌನ್ ಅಸ್ತ್ರ ಪ್ರಯೋಗ ಮಾಡಿದೆ. ಆದರೆ, ಆ ನಿಯಮವನ್ನು ಗಾಳಿಗೆ ತೂರಿ ಹಲವರು ವ್ಯಾಪಾರ ಮಾಡುತ್ತಿರುವ ಆಘಾತಕಾರಿ ಸಂಗತಿ ಬಹಿರಂಗವಾಗುತ್ತಿದೆ. ಇದಕ್ಕೆ ಪೊಲೀಸರು ತಕ್ಕ ಶಾಸ್ತಿ ಮಾಡುತ್ತಿದ್ದಾರೆ.
ಕೊರೊನಾ ಹಾವಳಿಯಿಂದಾಗಿ ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಇದರ ಮೂಲಕ ರಾಜ್ಯ ಸರ್ಕಾರ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ಸಂದರ್ಭದಲ್ಲಿಯೇ ನಗರದಲ್ಲಿನ ಬಟ್ಟೆ ಅಂಗಡಿಯ ಮಾಲೀಕ, ಗ್ರಾಹಕರಿಗೆ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಧನಲಕ್ಷ್ಮಿ ಜವಳಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ಅಂಗಡಿ ಮಾಲೀಕ ಮದನಲಾಲ್ ಓಸ್ವಾಲ್ ಹಾಗೂ ಆತನ ಮಗ ಕಲ್ಪೇಶ್ ಓಸ್ವಾಲ್ ತಮ್ಮ ಅಂಗಡಿಯ ಒಳಗೆ ಗ್ರಾಹಕರನ್ನು ಕರೆದುಕೊಂಡು ವ್ಯಾಪಾರ ನಡೆಸುತ್ತಿದ್ದರು.
ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಇವರ ಅಂಗಡಿ ಮೇಲೆ ಖಚಿತ ಮಾಹಿತಿ ಮೇರೆಗೆ ಶಹರ ಪೊಲೀಸರು ದಾಳಿ ಮಾಡಿ, ಅಂಗಡಿ ಮಾಲೀಕರನ್ನು ವಶಕ್ಕೆ ಪಡೆದಿದ್ದಾರೆ.
ಧನಲಕ್ಷ್ಮೀ ಬಟ್ಟೆ ಅಂಗಡಿಯನ್ನು ಸೀಜ್ ಮಾಡಲಾಗಿದೆ. ಅಂಗಡಿ ಮಾಲೀಕರಿಗೆ ವ್ಯಾಪಾರ ಆದರೆ ಸಾಕು, ಉಳಿದವರಿಗೆ ಏನಾದರೂ ನಮಗೇನು? ಎನ್ನುವ ವರ್ತನೆ ತೋರುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮದುವೆಗೆ ಜನರು ಜವಳಿ ಹಾಕಲು ತಂಡೋಪ ತಂಡವಾಗಿ ಬಂದು ಬಟ್ಟೆ ಖರೀದಿಯಲ್ಲಿ ಬ್ಯುಸಿಯಾಗಿದ್ದರು. ಸದ್ಯ ಇಬ್ಬರನ್ನು ಬಂಧಿಸಿದ ಪೊಲೀಸರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

