ವಿಜಯಸಾಕ್ಷಿ ಸುದ್ದಿ, ಗದಗ/ಕೊಪ್ಪಳ
ಕೊರೊನಾ ಸೋಂಕು ತಡೆಗಟ್ಟಲು ಸರಕಾರ ಲಾಕ್ಡೌನ್ ಜಾರಿ ಮಾಡಿದೆ. ಅದರಲ್ಲೂ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಭಾಯಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಹೊಣೆ ಹೊರಿಸಲಾಗಿದೆ.
ಗದಗ ಜಿಲ್ಲೆಯಲ್ಲೂ ಇಂದಿನಿಂದ (ಮೇ 27) ಜೂನ್ 1ರವರೆಗೆ ಕಠಿಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲೂ ಸೋಮವಾರದಿಂದಲೇ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಮೆಡಿಕಲ್ ಹಾಗೂ ಬೆಳಗ್ಗೆ 6ರಿಂದ 8ರ ವರೆಗೆ ಹಾಲಿನ ಅಂಗಡಿಗಳನ್ನು ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳು, ತರಕಾರಿ, ಮಾಂಸ, ಮದ್ಯ ಮಾರಾಟಕ್ಕೂ ಅವಕಾಶ ಇಲ್ಲ. ಹೀಗಾಗಿ ಇಲ್ಲೊಂದಿಷ್ಟು ಜನ ಈ ಕಠಿಣ ಲಾಕ್ ಡೌನ್ ಅನ್ನು ಬಂಡವಾಳ ಮಾಡಿಕೊಳ್ಳಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಸ್ಟೇಷನ್ ಬೇಲ್ ಮೇಲೆ ಹೊರ ಬಂದಿದ್ದಾರೆ.

ಹೌದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೆಲವು ಅಕ್ರಮ ಮದ್ಯ ದಂಧೆಕೋರರು, ಕಠಿಣ ಲಾಕ್ಡೌನ್ದಲ್ಲಿ ದುಡ್ಡು ಮಾಡುವ ಹಪಾಹಪಿಗೆ ಹೋಗಿ ಪೊಲೀಸರ ಅತಿಥಿಗಳಾಗಿದ್ದಾರೆ.
ನಿತ್ಯವೂ ಗಜೇಂದ್ರಗಡ ಪಟ್ಟಣದಿಂದ ಕದ್ದು ಮುಚ್ಚಿ ಮದ್ಯ ಖರೀದಿ ಮಾಡಿ ತಮ್ಮೂರಲ್ಲಿ ಹೆಚ್ಚಿನ ಬೆಲೆಗೆ ಮಾರಿ ದುಡ್ಡು ಮಾಡಿಕೊಳ್ಳುತ್ತಿದ್ದ ಈ ದಂಧೆಕೋರರಿಗೆ ಗದಗ ಜಿಲ್ಲೆಯಲ್ಲೂ ಗುರುವಾರದಿಂದ ಸಂಪೂರ್ಣ ಲಾಕ್ಡೌನ್ ಅಂತ ಸುದ್ದಿ ಕೇಳಿ ಬುಧವಾರವೇ ಮದ್ಯ ಖರೀದಿಗೆ ಬಂದಿದ್ದರು. ಇವರು ಖರೀದಿ ಮಾಡುತ್ತಿರುವುದು ಅದ್ಯಾರ ಕಣ್ಣಿಗೆ ಬಿತ್ತೊ ಗೊತ್ತಿಲ್ಲ. ಪೊಲೀಸರು ಇಂತಹವರನ್ನು ಹಿಡಿದು ಲಕ್ಷಾಂತರ ರೂ, ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಯಲಬುರ್ಗಾ ತಾಲೂಕಿನ ಚಿಕ್ಕ ಮ್ಯಾಗೇರಿಯ ಜಂಬಣ್ಣ ಶಿವಪ್ಪ ರಾಠೋಡ, ವೀರೇಶ್ ಈರಪ್ಪ ಕುರಿ, ವೀರೇಶ್ ವೀರನಗೌಡ್ ಈಳಿಗೇರ, ಮುದಕಪ್ಪ ಶಿದ್ದಪ್ಪ ಆಡಿನ, ಗದಗೇರಿ ತಾಂಡಾದ ಪಾಂಡಪ್ಪ ಜಾಂಪಲೆಪ್ಪ ಚವ್ಹಾಣ, ತುಮ್ಮರಗುದ್ದಿಯ ಮಂಜುನಾಥ್ ಉಮೇಶಪ್ಪ ಕಾರಭಾರಿ ಎಂದು ಗುರುತಿಸಲಾಗಿದೆ. ಇವರಿಂದ ವಾಹನ ಸಮೇತ 81 ಸಾವಿರ ರೂ. ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕುಷ್ಟಗಿ ತಾಲೂಕಿನ ಮಡಿಕೇರಿ ಗ್ರಾಮದ ಜಗನ್ನಾಥ ಕಳಕಪ್ಪ ಮುದಗಲ್, ನರಸಾಪುರದ ಬಸಪ್ಪ ಶರಣಪ್ಪ ಯರಕನಾಳ ಎಂಬುವವರಿಂದ ಬೈಕ್ ಸಮೇತ 30 ಸಾವಿರ ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ.
ಮೂರನೇ ಪ್ರಕರಣದಲ್ಲಿ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ವಿಟ್ಠಲ ಮುನಿಯಪ್ಪ ಡೊಳ್ಳಿನ ಎಂಬಾತನನ್ನು ಬಂಧಿಸಿ ಆತನಿಂದ 20 ಸಾವಿರ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಬಂದಿತರೆಲ್ಲರೂ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸ್ಟೇಷನ್ ಬೇಲ್ ಮೇಲೆ ಹೊರಗೆ ಬಂದಿದ್ದಾರೆ.
ಅಕ್ರಮದ ಹಾಟ್ ಸ್ಪಾಟ್!
ಗಜೇಂದ್ರಗಡ ಪಟ್ಟಣ ವ್ಯಾಪಾರ, ವಹಿವಾಟಿಗೆ ಹೆಚ್ಚು ಫೇಮಸ್. ಅಷ್ಟೇ ಪ್ರಮಾಣದಲ್ಲಿ ಅಕ್ರಮ ಚಟುವಟಿಕೆಗಳ ಹಾಟ್ಸ್ಪಾಟ್ ಕೂಡ ಆಗಿದೆ. ಇಲ್ಲಿ ಕಳ್ಳಭಟ್ಟಿ ಸಾರಾಯಿ, ಬಡ್ಡಿ ವ್ಯವಹಾರ, ಖೋಟಾ ನೋಟು ಚಲಾವಣೆ, ಮಟಕಾ ಹಾವಳಿ, ಇಸ್ಪೀಟು, ಅನ್ನ ಭಾಗ್ಯ ಅಕ್ಕಿ ಅಕ್ರಮ ಸಾಗಾಟ – ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕಳ್ಳಭಟ್ಟಿ ಸಾರಾಯಿ ಇಲ್ಲಿಂದಲೇ ಪಕ್ಕದ ಜಿಲ್ಲೆಗಳಿಗೆ ಸರಬರಾಜು ಆಗುತ್ತದೆ.
ಕೊಪ್ಪಳ ಜಿಲ್ಲೆಯ ಬಹುತೇಕ ಹಳ್ಳಿಯ ಕೆಲವೊಂದಿಷ್ಟು ಜನ ಗಜೇಂದ್ರಗಡ ಪಟ್ಟಣದ ಕೆಲವರ ಜೊತೆಗೆ ಇಂತಹ ವ್ಯವಹಾರಗಳಿಗಾಗಿಯೇ ನಂಟು ಹೊಂದಿದ್ದಾರೆ.
ಕುಷ್ಟಗಿ, ಯಲಬುರ್ಗಾ ತಾಲೂಕಿನ ಕೆಲವು ಮಟಕಾ ಬುಕ್ಕಿಗಳು ಗಜೇಂದ್ರಗಡ ಪಟ್ಟಣಕ್ಕೆ ಬಂದು ತಮ್ಮ ದಂಧೆ ನಡೆಸುತ್ತಾರೆ. ಆಗಾಗ ಒಂದೊಂದು ಕೇಸ್ ಆಗಿ ಬೆಳಕಿಗೆ ಬರುತ್ತವೆ. ಆದರೆ ಎಷ್ಟೋ ಪ್ರಕರಣಗಳು ದಾಖಲಾಗುವುದಿಲ್ಲ. ಅದಕ್ಕೆ ಕಾರಣ ಒಂದೆರೆಡಲ್ಲ.
ಇಂತಹ ಲಾಕ್ಡೌನ್ ಸಂದರ್ಭದಲ್ಲಿಯೂ ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟವಾಗುತ್ತಿದೆ. ಇದೇನೂ ಪೊಲೀಸರಿಗೆ ಗೊತ್ತಿಲ್ಲ ಅಂತ ಏನೂ ಇಲ್ಲ. ಎಲ್ಲವೂ ಗೊತ್ತಿದೆ. ಆದರೂ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಅಂತ ಕೆಲವು ಮೂಲಗಳಿಂದ ತಿಳಿದು ಬಂದಿದೆ. ಇನ್ನಾದರೂ ಪೊಲೀಸರು ಖಡಕ್ಕಾಗಿ ವರ್ತಿಸಿ, ಇಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಗದಗ-ಕೊಪ್ಪಳ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.