ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
Advertisement
ತಾಲ್ಲೂಕಿನ ಹಲಗೇರಿ ಗ್ರಾಮದಲ್ಲಿ ಗುರುವಾರ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಬಸಪ್ಪ ತಳವಾರ ಅವರಿಗೆ ಸೇರಿದ ಮೇವಿನ ಮತ್ತು ಶೇಂಗಾ ಬಳ್ಳಿಯ 2 ಬಣವೆಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಇಪ್ಪತ್ತರಿಂದ ಮೂವತ್ತು ಸಾವಿರ ರೂಪಾಯಿ ಮೌಲ್ಯದ ಮೇವು ಹಾಗೂ ಶೇಂಗಾ ಬಳ್ಳಿಯ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ವರ್ಷವಿಡೀ ಜಾನುವಾರುಗಳಿಗೆ ಮೇಯಿಸಲು ಇಟ್ಟುಕೊಂಡಿದ್ದ ಮೇವು ಸುಟ್ಟು ಕರಕಲಾಗಿದನ್ನು ಕಂಡು ರೈತನ ಕಣ್ಣೀರಿನ ಗೋಳಾಟ ಎಲ್ಲರ ಮನ ಕಲಕಿತು.
ಬಣವೆಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಗ್ರಾಮಸ್ಥರು, ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವ ಮೂಲಕ ಸಂಭವಿಸಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.