ವಿಜಯಸಾಕ್ಷಿ ಸುದ್ದಿ, ಕಲಬುರಗಿ
ಕೊರೊನಾದಿಂದಾಗಿ ಹೋಂ ಐಸೋಲೇಷನ್ ನಲ್ಲಿರುವ 17 ಜನರು ಒಂದೇ ಮೊಬೈಲ್ ಸಂಖ್ಯೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ, ಕೆಲವರು ತಮ್ಮ ಸಂಖ್ಯೆ ನೀಡದೆ ಪತ್ರಕರ್ತರ ಸಂಖ್ಯೆಯನ್ನು ಕೂಡ ನೀಡಿದ್ದಾರೆ. ಈ ಘಟನೆ ಜಿಲ್ಲೆಯ ಶಹಾಬಾದ್ ನಲ್ಲಿ ನಡೆದಿವೆ.
ಹೆಚ್ಚಿನ ಜನ ಸೋಂಕಿತರು ಬೇರೆಯವರ ಸಂಖ್ಯೆ ನೀಡಿರುವುದು ಕೂಡ ಬಯಲಿಗೆ ಬಂದಿದೆ. ಇದೆಲ್ಲ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಡೆದಿದೆ ಎನ್ನಲಾಗಿದೆ.
ನಗರಸಭೆ ಸಿಬ್ಬಂದಿಗಳು ಬೇರೆಯವರ ಸಂಖ್ಯೆ ನೀಡಿದ್ದರಿಂದಾಗಿ ಅಧಿಕಾರಿಗಳು ಕರೆ ಮಾಡಿದರೆ ಅದು ಬೇರೆಯವರಿಗೆ ತೆರಳುತ್ತಿದೆ. ನಮಗೆ ಯಾವುದೇ ಲಕ್ಷಣವಿಲ್ಲ, ನಾವು ಇದೇ ಊರಲ್ಲಿದ್ದೇವೆ. ಆರಾಮವಾಗಿದ್ದೇವೆ ಎಂದು ಜನ ಅಧಿಕಾರಿಗಳ ಕರೆಗೆ ಸ್ಪಷ್ಟನೆ ನೀಡುತ್ತಿದ್ದಾರೆ. ಇದರಿಂದ ಅಧಿಕಾರಿಗಳು ತಲೆ ಚಚ್ಚಿಕೊಳ್ಳುವಂತಾಗಿದೆ.
ಒಂದೇ ಮೊಬೈಲ್ ಸಂಖ್ಯೆ 17 ಜನರ ಹೆಸರಲ್ಲಿದೆ. ಇನ್ನೊಂದು ಮೊಬೈಲ್ ಸಂಖ್ಯೆಯನ್ನು 22 ಜನರು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹೋಮ್ ಐಸೋಲೇಷನ್ ಇದ್ದವರ ಹೆಸರು ರಿಜಿಸ್ಟರ್ ಆದ ನಂತರ ಅವರ ಮೊಬೈಲ್ ಗೆ ಓಟಿಪಿ ಸಂಖ್ಯೆ ಬರುತ್ತದೆ. ಅದು ಹೇಗೆ? 17 ಜನ ಒಂದೇ ಸಂಖ್ಯೆ ನೀಡಿದ್ದಾರೆ. ಅಲ್ಲದೇ, ಅಧಿಕಾರಿಗಳು ಓಟಿಪಿ ಹೇಗೆ ಪಡೆದಿದ್ದಾರೆ ಎಂಬ ಚರ್ಚೆ ಈಗ ಶುರುವಾಗಿದೆ.
ಅಧಿಕಾರಿಗಳು ಒಂದೇ ಸಂಖ್ಯೆಯಿಂದ 17 ಜನರನ್ನು ಸಂಪರ್ಕಿಸಿ ಕಿಟ್ ನೀಡಿದ್ದಾದರೂ ಹೇಗೆ? ಎಂಬ ಪ್ರಶ್ನೆ ಸದ್ಯ ಮೂಡುತ್ತಿದೆ. ಇದಕ್ಕೆ ಜವಾಬ್ದಾರಿ ಯಾರು? ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾವೈದ್ಯಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ತಾಲೂಕು ವೈದ್ಯಾಧಿಕಾರಿಗಳಿಂದ ತನಿಖೆ ನಡೆಸುತ್ತೇನೆ. ಎಲ್ಲಿ, ಯಾರಿಂದ ತಪ್ಪಾಗಿದೆ ಎಂದು ವಿಚಾರಣೆ ನಡೆಸಲಾಗುವುದು ಎಂದು ವೈದ್ಯಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ತಿಳಿಸಿದ್ಧಾರೆ. ಇಂತಹ ಘಟನೆಗಳು ರಾಜ್ಯದಲ್ಲಿಯೂ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.