ಇದ್ದಿಲು ಮಸಿಗೆ ಬುದ್ಧಿ ಹೇಳಿದಂತಿದೆ; ಅಶೋಕ ಮಂದಾಲಿ ವ್ಯಂಗ್ಯ

0
Spread the love

ದಾವಣಗೆರೆಯಲ್ಲಿ ಬೆಂಗಳೂರಿನ 7ಜನ ಬಿಜೆಪಿ ಎಂಎಲ್‌ಸಿಗಳ ಹೆಸರು ಸೇರಿಸಿದ್ಯಾರು? ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಬಿಜೆಪಿ ಅನುಸರಿಸಿದ ವಾಮಮಾರ್ಗ ಗದಗ ಜಿಲ್ಲೆಯ ಬಿಜೆಪಿಗರಿಗೆ ಕಾಣುತ್ತಿಲ್ಲವೇ?: ಮಂದಾಲಿ ಪ್ರಶ್ನೆ

Advertisement

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಕಾಂಗ್ರೆಸ್ ಮೇಲೆ ಮಾಡುತ್ತಿರುವ ಆರೋಪಕ್ಕೂ ಮುನ್ನ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗರು ಹಿಡಿದಿದ್ದು ಯಾವ ಮಾರ್ಗ ಎಂಬುದನ್ನು ಹೇಳಲಿ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ವಾಮಮಾರ್ಗ ಹೇಳಿಕೆಯ ಬಗ್ಗೆ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಾವಣಗೆರೆ ಮಹಾನಗರ ಪಾಲಿಕೆಗೆ ಕಾಂಗ್ರೆಸ್ 22 ಜನ, ಬಿಜೆಪಿಯವರು 17 ಜನ ಆಯ್ಕೆಯಾಗಿದ್ದರು. ಇವರೊಂದಿಗೆ ಐವರು ಪಕ್ಷೇತರರು, ಓರ್ವ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದರು. ಓರ್ವ ಪಕ್ಷೇತರ, ಸ್ಥಳೀಯ ಶಾಸಕ, ವಿಪ ಸದಸ್ಯರು ಸೇರಿ ಕಾಂಗ್ರೆಸ್ 23 ಸಂಖ್ಯಾಬಲದೊಂದಿಗೆ ಅಧಿಕಾರ ಹಿಡಿಯಬೇಕಿತ್ತು.
ಆದರೆ, ಬಿಜೆಪಿಯವರು ಬೆಂಗಳೂರಿನಿಂದ ರವಿಕುಮಾರ, ತೇಜಸ್ವಿನಿಗೌಡ, ಲೇಹರಸಿಂಗ್, ನಂಜುಂಡಿ, ಚಿದಾನಂದಗೌಡ, ರಾಣೆಬೆನ್ನೂರಿನ ಆರ್.ಶಂಕರ್ ಸೇರಿ ಏಳು ಜನರನ್ನು ದಾವಣಗೆರೆಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ, ವಾಮಮಾರ್ಗದಿಂದ ಅಧಿಕಾರ ಪಡೆದುಕೊಂಡಿದ್ದಾರೆ.

ಗದಗನ ಬಿಜೆಪಿ ಮುಖಂಡರ ಹೇಳಿಕೆ ಇದ್ದಿಲು ಮಸಿಗೆ ಬುದ್ಧಿ ಹೇಳಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ನಗರಸಭೆ ಚುನಾವಣೆಯಲ್ಲಿ ಗೆದ್ದಿರುವ ವಾರ್ಡ್ ನಂ.28, 24 ಮತ್ತು 5ರಲ್ಲಿ ಬಿಜೆಪಿಗರು ಗೆದ್ದಿದ್ದು, ಅನ್ಯಾಯ ಮಾರ್ಗದಿಂದಲೇ ಅಲ್ಲವೇ?. 28ನೇ ವಾರ್ಡಿನಿಂದ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಅನಿಲ್ ಅಬ್ಬಿಗೇರಿ ಈವರೆಗೆ ಲಿಂಗಾಯತ ಎಂದು ಬಿಂಬಿಸಿಕೊಂಡು ಬಂದಿದ್ದರು. ಆದರೆ, ನಗರಸಭೆ ಚುನಾವಣೆ ಹೊತ್ತಲ್ಲಿ ಗಾಣಿಗ ಎಂದು ಸರ್ಟಿಫಿಕೇಟ್ ಪಡೆದಿದ್ದಾರೆ. ಅಭ್ಯರ್ಥಿಯ ಎಲ್‌ಸಿಯಲ್ಲಿ ಲಿಂಗಾಯತ ಎಂದು ನಮೂದಾಗಿದೆ. ಅವರು ಗದಗನ ನಿವಾಸಿಯಾಗಿದ್ದುಕೊಂಡರೂ ಗದಗನ ಸಮಾಜದ ಸದಸ್ಯತ್ವ ಪಡೆಯದೇ ಹುಬ್ಬಳ್ಳಿ ಸಂಘದಿಂದ ಗಾಣಿಗ ಜಾತಿಯ ಸದಸ್ಯತ್ವ ಮುಂದಿಟ್ಟುಕೊಂಡು, ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ವಾಮ ಮಾರ್ಗ ಬಿಜೆಪಿಯವರಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಮುಖಂಡರ ಸಹಾಯ ಪಡೆದು ಅನಿಲ್ ಅಬ್ಬಿಗೇರಿ ಗದಗನ ಬದಲಾಗಿ ಹುಬ್ಬಳ್ಳಿ ಸಂಘದಿಂದ ಸದಸ್ಯತ್ಯ ಪಡೆದಿದ್ದು ಏಕೆ? ಇದು ವಾಮಮಾರ್ಗ ಅಲ್ಲವೇ?. ಇನ್ನು ಯಾವುದೇ ಜಾತಿ ಪ್ರಮಾಣ ಪತ್ರ ಪಡೆಯುವಾಗ ತಂದೆ-ತಾಯಿ ಪ್ರಮಾಣ ಪತ್ರದಲ್ಲಿನ ಜಾತಿ ಪರಿಗಣಿಸುತ್ತಾರೆ ಹೊರತು ತಂದೆಗೆ ಮಕ್ಕಳ ಸರ್ಟಿಫಿಕೇಟ್‌ನಲ್ಲಿನ ಜಾತಿಯನ್ನಲ್ಲ. ಇದು ಯಾವ ಮಾರ್ಗ ಎಂಬುದನ್ನು ಬಿಜೆಪಿಯವರೇ ಹೇಳಲಿ ಎಂದು ಕಿಡಿಕಾರಿದ್ದಾರೆ.

ಓರ್ವ ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್‌ನ ಮೂವರು ಸದಸ್ಯರನ್ನು ಗದಗನಲ್ಲಿ ಹೆಸರು ಸೇರ್ಪಡೆಗೆ ನೀಡಿರುವ ಅರ್ಜಿ ಬಗ್ಗೆ ಪ್ರಶ್ನಿಸುವ ಬಿಜೆಪಿಗರು, ಅಧಿಕಾರಿಗಳ ಮೇಲೆ ಒತ್ತಡ ತಂದು ಸೇರ್ಪಡೆ ಮಾಡದಂತೆ ಮಾಡಿದ್ದಾರೆ. ದಾವಣಗೆರೆಯಲ್ಲಿ ಸೇರ್ಪಡೆಗೊಂಡ ಬೆಂಗಳೂರಿನ ಏಳು ಜನ ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ದಾವಣಗೆರೆಯಲ್ಲಿ ಮತದಾರರಾಗಿದ್ದರ ಬಗ್ಗೆ ಮಾತನಾಡಲಿ. ಅದು ಬಿಟ್ಟು ಬಾವಿಯಲ್ಲಿನ ಕಪ್ಪೆಯಂತೆ ಹೇಳಿಕೆ ನೀಡಬಾರದು ಎಂದು ಹರಿಹಾಯ್ದಿದ್ದಾರೆ.

ನಗರಸಭೆಯಲ್ಲಿ 18 ಸ್ಥಾನ ಗೆದ್ದಿದ್ದೇವೆ ಎನ್ನುವವರು ಅವಳಿ ನಗರದಲ್ಲಿ ಕಾಂಗ್ರೆಸ್‌ಗೆ ಬಂದ ಮತಗಳೆಷ್ಟು, ಬಿಜೆಪಿಗೆಷ್ಟು ಬಂದಿವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ. ಗದಗ-ಬೆಟಗೇರಿಯ 35 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ಗೆ 34,972 ಮತ, ಬಿಜೆಪಿಗೆ 34,311 ಮತ ಬಂದಿವೆ. ಇಲ್ಲೂ ಕಾಂಗ್ರೆಸ್ ಮುನ್ನಡೆ ಇದೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here