ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ
ಹಿರಿಯ ಸಾಹಿತಿ, ಕನ್ನಡ ಕಿಂಕರ ಎಂದೇ ಖ್ಯಾತಿಯಾಗಿದ್ದ ಭೀಮಯ್ಯ ಮೇಷ್ಟ್ರು ಇಹಲೋಕ ತ್ಯಜಿಸಿದ್ದಾರೆ.
ಭೀಮಯ್ಯ(96) ಇಂದು ವಿಧಿವಶರಾಗಿದ್ದಾರೆ. ಈ ಮೂಲಕ ಸಾಹಿತ್ಯ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಇದರಿಂದಾಗಿ ಸಾರಸ್ವತ ಲೋಕ ಕಣ್ಣೀರು ಸುರಿಸುತ್ತಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ಮಾರೇನಹಳ್ಳಿ ಗ್ರಾಮದ ಕೃಷಿ ಕುಟುಂಬದಲ್ಲಿ 1925ರಲ್ಲಿ ಭೀಮಯ್ಯ ಮೇಷ್ಟ್ರು ಜನಿಸಿದ್ದರು. ಇವರ ತಾತ ಸಣ್ಣಲಿಂಗೇಗೌಡ ಅವರ ಪ್ರಭಾವಕ್ಕೆ ಒಳಗಾಗಿದ್ದ ಭೀಮಯ್ಯ ಅವರು, ಆಧಾತ್ಮ ಮತ್ತು ತತ್ವ ಸಾಧನೆಯನ್ನು ಗಳಿಸಿಕೊಂಡಿದ್ದರು.
ರಾಮಾಯಣ, ಗದುಗಿನ ಭಾರತ, ದೇವಿ ಮಹಾತ್ಮೆ ಇವರ ಪಾಲಿಗೆ ಆಧಾತ್ಮ ಪಠ್ಯಗಳಾಗಿದ್ದವು.
ಇವರು 1950ರ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಪಡೆದಿದ್ದರು. ಆದರೆ, ಎಲ್ಲರಂತೆ ಸರ್ಕಾರಿ ಕೆಲಸಕ್ಕೆ ಸೇರದೆ, ಹಳ್ಳಿಯಲ್ಲಿಯೇ ಉಳಿದರು. ನೈತಿಕ ಮೌಲ್ಯಗಳ ಕುರಿತು ಮಾತನಾಡುತ್ತಿದ್ದರಿಂದಾಗಿ ಇವರನ್ನುಇವರು ‘ಭೀಮಯ್ಯ ಮೇಷ್ಟ್ರು’ ಎಂದೇ ಪ್ರಸಿದ್ಧಿ ಪಡೆದಿದ್ದರು.
ಇವರು, ‘ಆನಂದ ಮಠ’ ಎಂಬ ಸಂಘವನ್ನು ಸ್ಥಾಪಿಸಿದ್ದರು. ನಾಟಕ, ಕಾವ್ಯ, ವಚನಗಳಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ‘ಸತ್ವ ಪರೀಕ್ಷೆ’, ‘ಜೀವನಾಮೃತ’, ದೇವಿ ಮಹಾತ್ಮೆ ಕಥೆಯನ್ನು ಆಧರಿಸಿದ ‘ಚಿದಾನಂದ ಲೀಲೆ’ ಎಂಬ ನಾಟಕಗಳನ್ನು ರಚಿಸಿದ್ದರು. ರಾಮಾಯಣ ದರ್ಶನಂ ಮಹಾಕಾವ್ಯದ ಸರಳ ಗದ್ಯಾನುವಾದ ‘ರಾಮಾಯಣ ಸಂದರ್ಶನ’, ‘ಮಂಕು ಭೀಮನ ಬೊಗಳೆ’ ಎಂಬ ಕೃತಿಗಳನ್ನು ರಚಿಸಿದ್ದರು. ಹಿರಿಯೂರಿನಲ್ಲಿ ನಡೆದಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಪಟ್ಟನಾಯಕನಹಳ್ಳಿ ಮಠದ ‘ಸ್ಪಟಿಕಶ್ರೀ’ ಪ್ರಶಸ್ತಿ. ತತ್ವಜ್ಞಾನಿ ಪಟೇಲ್ ಬೊಮ್ಮೆಗೌಡ ಸ್ಮಾರಕದ ತತ್ವಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.
ಮೃತರು ಇಬ್ಬರು ಪುತ್ರಿಯರು, ಮೂವರು ಪುತ್ರರು ಹಾಗೂ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ.