–ಬೆಳ್ಳಂಬೆಳಗ್ಗೆ ಯಮರೂಪಿಯಾದ ಟ್ಯಾಂಕರ್
ವಿಜಯಸಾಕ್ಷಿ ಸುದ್ದಿ,
ಗದಗ/ಕೊಪ್ಪಳ: ಈರುಳ್ಳಿ ಮಾರಲು ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿಯಿಂದ ಬೆಂಗಳೂರಿಗೆ ಹೊರಟಿದ್ದ ರೈತ ಸೇರಿದಂತೆ ನಾಲ್ವರ ಮೇಲೆ ಟ್ಯಾಂಕರ್ ಹರಿದು ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಶನಿವಾರ ಬೆಳಗ್ಗೆ ಚಿತ್ರದುರ್ಗದ ಬಳಿ ಸಂಭವಿಸಿದೆ.

ಮೃತರನ್ನು ರೋಣ ತಾಲೂಕಿನ ಅರಹುಣಸಿಯ ರೈತ ಶರಣಪ್ಪ ಅಳವಂಡಿ, ವಿಜಯಪುರ ಮೂಲದ ಲಾರಿ ಕ್ಲೀನರ್ ಸಂಜಯ್, ಲಿಂಗಸೂಗುರು ತಾಲೂಕಿನ ಬಯಲುಗುಡ್ಡ ಮೂಲದ ಹುಲಗಪ್ಪ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳ ಮೂಲದ ಲಾರಿ ಚಾಲಕ ಮಂಜುನಾಥ್ ಬಾದವಾಡಗಿ ಎಂದು ಗುರುತಿಸಲಾಗಿದೆ.
ಲಾರಿಯಲ್ಲಿ ಈರುಳ್ಳಿ ಹಾಕಿಕೊಂಡು ಬೆಂಗಳೂರಿನತ್ತ ಹೋಗುತ್ತಿರುವಾಗ ನಸುಕಿನ ಜಾವ ಟೈರ್ ಪಂಕ್ಚರ್ ಆಗಿದೆ. ಹೆದ್ದಾರಿಯ ಪಕ್ಕದಲ್ಲಿ ಲಾರಿ ನಿಲ್ಲಿಸಿ ಪಂಕ್ಚರ್ ಸರಿಪಡಿಸುವ ಕೆಲಸದಲ್ಲಿ ಲಾರಿಯಲ್ಲಿದ್ದ ಐದು ಜನ ನಿರತರಾಗಿರುವಾಗ ಹಿಂಬದಿಯಿಂದ ಯಮರೂಪಿಯಾಗಿ ಬಂದ ಟ್ಯಾಂಕರ್ ಐವರ ಮೇಲೂ ಹರಿದಿದೆ. ನಾಲ್ವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಓರ್ವನ ಸ್ಥಿತಿ ತೀರಾ ಗಂಭೀರವಾಗಿದೆ. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.