ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ
ಸರ್ಕಾರಿ ಕಚೇರಿ ಆವರಣವನ್ನೇ ಇಲ್ಲಿಯ ಸಿಬ್ಬಂದಿ ಬಾರ್ ಆಂಡ್ ರೆಸ್ಟೋರೆಂಟ್ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯ ಅಗ್ನಿಶಾಮಕ ದಳದ ಠಾಣೆಯಲ್ಲಿ ನಡೆದಿದೆ.
ಪಟ್ಟಣದ ಮಧ್ಯ ಭಾಗದಲ್ಲಿ ಇರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಠಾಣೆಯ ಆವರಣದಲ್ಲಿಯೇ ಹಾಡಹಗಲೆ ಅದೂ ಕರ್ತವ್ಯದ ಸಮಯದಲ್ಲಿಯೇ ಗುಂಡು -ತುಂಡಿನ ಮೋಜು ಮಸ್ತಿಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಹೇಳುತ್ತಾರೆ. ಆದರೆ, ಇದ್ಯಾವುದು ಅಥಣಿ ಅಗ್ನಿಶಾಮಕ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂಬಂತೆ ವರ್ತಿಸಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಮಾಧ್ಯಮದವರು ಚಿತ್ರೀಕರಣಕ್ಕೆ ಮುಂದಾದಾಗ ತುಂಡು ಬಿಟ್ಟು, ಗುಂಡು ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಊಟ ಮಾತ್ರ ಮಾಡುತ್ತಿದ್ದೇವೆ ಎಂಬ ಸಬೂಬ ನೀಡಿದ್ದಾರೆ.
ಅಥಣಿ ತಾಲೂಕಿನಲ್ಲಿ ಆಕಸ್ಮಿಕವಾಗಿ ಏನಾದರು ಅಗ್ನಿ ಅವಘಡ ಸಂಭವಿಸಿದ್ದರೆ, ಮಾತ್ರ ಇವರಿಗೆ ಕೆಲಸ ಇಲ್ಲವಾದರೆ, ಕಚೇರಿಯಲ್ಲಿಯೇ ಈ ರೀತಿ ಮಜಾ. ಆದರೆ, ಇವರು ಎಣ್ಣೆ ಹೊಡೆದ ಸಂದರ್ಭದಲ್ಲಿ ಏನಾದರೂ ಅವಘಡ ಸಂಭವಿಸಿದರೆ, ಈ ಸಿಬ್ಬಂದಿ ಜೀವ, ಆಸ್ತಿ – ಪಾಸ್ತಿ ಕಾಪಾಡುವುದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.