ವಿಜಯಸಾಕ್ಷಿ ಸುದ್ದಿ, ಧಾರವಾಡ
ದೇಶದಲ್ಲಿ ಕೊರೊನಾ ಎರಡು ಅಲೆ ಬೀಸಿದೆ. ಮೊದಲ ಅಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಹೆಚ್ಚಿನ ಹಾನಿ ಮಾಡಿರಲಿಲ್ಲ. ಆದರೆ, ಎರಡನೇ ಅಲೆ ಕೊರೊನಾ ಹೊಕ್ಕ ನಂತರ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದಾಗಿ ಸಾವು – ನೋವು ಸಂಭವಿಸುವಂತಾಗಿತ್ತು. ಆದರೆ, ಎರಡೂ ಅಲೆಗಳಲ್ಲಿಯೂ ಈ ಗ್ರಾಮದವರು ಕೊರೊನಾಗೆ ನೋ ಎಂಟ್ರಿ ಎಂದು ಹೇಳಿದೆ.
ಜಿಲ್ಲಾ ಕೇಂದ್ರದಿಂದ ಸ್ವಲ್ಪ ದೂರದಲ್ಲಿರುವ ಹುಣಶಿಕುಮರಿ ಹಾಗೂ ಶಿವನಗರ ಗ್ರಾಮಗಳಲ್ಲಿ ಎರಡೂ ಅಲೆಯಿಂದ ಒಂದೇ ಒಂದು ಕೊರೊನಾ ಕೇಸ್ ದಾಖಲಾಗಿಲ್ಲ. ಈ ಎರಡೂ ಗ್ರಾಮಗಳಲ್ಲಿ 100 ರಿಂದ 150 ಮನೆಗಳಿವೆ. ಅಲ್ಲದೇ, ಸುಮಾರು ಸಾವಿರದಷ್ಟು ಜನಸಂಖ್ಯೆ ಇವೆ. ಈ ಗ್ರಾಮಗಳಲ್ಲಿನ ಜನರು ಕೊರೊನಾ ಪ್ರಾರಂಭವಾಗುತ್ತಿದ್ದಂತೆ ನಗರಕ್ಕೆ ಬರುವುದನ್ನೇ ಬಿಟ್ಟು ಬಿಡುತ್ತಾರೆ. ಏನಾದರೂ ಬೇಕಾದರೆ ಅಕ್ಕಪಕ್ಕದ ಗ್ರಾಮಗಳಿಗೆ ಹೋಗಿ ದಿನಸಿ ಹಾಗೂ ತರಕಾರಿ ತರುತ್ತಿದ್ದಾರೆ. ಹೀಗಾಗಿ ಈ ಗ್ರಾಮಗಳಲ್ಲಿ ಕೊರೊನಾ ಹೊಕ್ಕಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ನಗರಕ್ಕೆ ಯಾರೂ ಹೋಗದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ, ನಗರದಿಂದ ಇಲ್ಲಿಗೆ ಯಾರಿಗೂ ಪ್ರವೇಶ ನೀಡಿಲ್ಲ. ಜಾನುವಾರು ಸಾಕಿ ಜೀವನ ನಡೆಸುವ ಇವರು, ಸದ್ಯ ಹೊಲ ಗದ್ದೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ, ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸುತ್ತಿಲ್ಲ. ಹೊರ ಗ್ರಾಮಗಳ ಕಾರ್ಯಕ್ರಮಗಳಿಗೆ ಯಾರೂ ಹೋಗುತ್ತಿಲ್ಲ. ಹಾಲು ಸರಬರಾಜು ಮಾಡುವುದಕ್ಕಾಗಿ ಬೇರೆ ಗ್ರಾಮಕ್ಕೆ ತೆರಳಲು ಗ್ರಾಮದ ಇಬ್ಬರನ್ನು ನೇಮಕ ಮಾಡಲಾಗಿದೆ. ಅವರಿಬ್ಬರೇ ದಿನಸಿ ಕೂಡ ತಂದು ಕೊಡಬೇಕು. ಈ ರೀತಿ ಶಿಸ್ತು ಬದ್ಧ ಜೀವನ ನಡೆಸುತ್ತಿರುವ ಇವರು ಕೊರೊನಾ ಬರದಂತೆ ಎಚ್ಚರಿಕೆ ವಹಿಸಿದ್ದಾರೆ.