ವಿಜಯಸಾಕ್ಷಿ ಸುದ್ದಿ, ಧಾರವಾಡ
ಕೇವಲ ಎರಡೇ ವಾರದಲ್ಲಿ ಒಂದೇ ಗ್ರಾಮದ ಬರೋಬ್ಬರಿ 13 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಇಡೀ ಗ್ರಾಮ ಹಾಗೂ ಸುತ್ತಮುತ್ತಲಿನ ಜನ ಆತಂಕದಲ್ಲಿದ್ದು, ಸದ್ಯ ದೇವರ ಮೊರೆ ಹೋಗಿದ್ದಾರೆ.
ತಾಲೂಕಿನ ಮನಸೂರ ಗ್ರಾಮದಲ್ಲಿ ಕೇವಲ ಎರಡು ವಾರದಲ್ಲಿ ಬರೋಬ್ಬರಿ 13 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರು ಕೋವಿಡ್ ನಿಂದ ಸಾವನ್ನಪ್ಪಿದ್ದರೆ, 11 ಜನ ಇತರೆ ಖಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಆದರೆ, ಹಲವರು ಮಾತ್ರ ಕೋವಿಡ್ ನತ್ತ ಬೊಟ್ಟು ತೋರಿಸುತ್ತಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ಗ್ರಾಮಸ್ಥರು ಮನೆಯಿಂದ ಹೊರಗೆ ಬರಲು ಭಯ ಪಡುತಿದ್ದಾರೆ. ಮನೆ ಬಾಗಿಲು ಹಾಕಿಕೊಂಡೇ ಸದ್ಯ ಜನರು ಮನೆಯಲ್ಲಿಯೇ ಉಳಿದಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಹಲವರು ದೇವರ ಮೊರೆ ಹೋಗಿದ್ದಾರೆ. ಗ್ರಾಮದ ಜನರನ್ನು ಉಳಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಕಳೆದ 7 ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಡೋಣಿ ಕರೆಮ್ಮ ದೇವಸ್ಥಾನ ಕಟ್ಟಲಾಗುತ್ತಿತ್ತು. ಆದರೆ, ಅದು ಹಲವು ಕಾರಣಗಳಿಂದ ಅರ್ಧಕ್ಕೆ ನಿಂತಿತ್ತು. ಹೀಗಾಗಿ ಹಳ್ಳದ ಕರೆಮ್ಮ ದೇವಸ್ಥಾನದಲ್ಲಿ ಡೋಣಿ ಕರೆಮ್ಮ ದೇವಸ್ಥಾನ ಕಟ್ಟಿಸುವುದಾಗಿ ಗ್ರಾಮಸ್ಥರು ದೇವಿಯಲ್ಲಿ ಹರಕೆ ಹೊತ್ತಿದ್ದಾರೆ.
ಈಗಾಗಲೇ ಈ ಕಾರ್ಯ ಕೂಡ ಪ್ರಾರಂಭವಾಗಿದೆ.
ಹಿಂದಿನ ವಾರವಷ್ಟೇ ಒಂದೇ ಓಣಿಯಲ್ಲಿ 4 ಜನ ಎರಡು ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದರು. ಆದರೆ, ದೇವರ ಮೊರೆ ಹೋಗುತ್ತಿದ್ದಂತೆ ಗ್ರಾಮದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.