ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕನ್ನಡ ನಾಡು-ನುಡಿ, ಭಾಷೆ ಉಳಿಸುವ ಹೊಣೆ ನಮ್ಮದು ಎಂದು ನ್ಯಾಯವಾದಿ ಮಂಜುಳಾ ದೇಸಾಯಿಮಠ ಹೇಳಿದರು.
ಅವರು ಮುಳಗುಂದ ಪಟ್ಟಣದ ಬಸವೇಶ್ವರ ಗುಡ್ಡದ ಮೇಲೆ ಕನ್ನಡ ರಕ್ಷಣಾ ವೇದಿಕೆ ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ನಮ್ಮ ಮಾತೃಭಾಷೆ, ಕನ್ನಡ ನಾಡು-ನುಡಿ, ಭಾಷೆ, ನೆಲ-ಜಲ ಉಳಿಸಲು ನೂರಾರು ಮಹನೀಯರು ಶ್ರಮಿಸಿದ್ದಾರೆ. ಅವರೆಲ್ಲರ ಹೋರಾಟದ ಫಲದಿಂದ ಇಂದು ನಾವೆಲ್ಲರೂ ಕನ್ನಡ ತಾಯಿಯೊಂದೇ ಮಕ್ಕಳಂತೆ ಜೀವನ ಸಾಗಿಸುತ್ತಿದ್ದು, ಕನ್ನಡ ಉಳಿಸಿ-ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕದಳಿ ವೇದಿಕೆ ಅಧ್ಯಕ್ಷೆ ರಾಜೇಶ್ವರಿ ಬಡ್ನಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸರ್ಕಾರ ಸಾಕಷ್ಟು ಆದೇಶಗಳನ್ನು ಹೊರಡಿಸುವ ಮೂಲಕ ಆಡಳಿತದಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಿ ಕಾರ್ಯಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವ ಮತ್ತು ಕನ್ನಡ ಶಾಲೆಗೆ ಸೇರಿಸುವ ಪಣ ತೊಡಬೇಕು ಎಂದರು.ಕರವೇ ಉಪಾಧ್ಯಕ್ಷ ದಾವೂದ ಜಮಾಲಸಾಬನವರ, ಗುಳಪ್ಪ ಮಜ್ಜಿಗುಡ್ಡ, ಶರಣಪ್ಪ ಕಮಾಜಿ, ಗಿರೀಶ ಪಿರಂಗಿ, ದೇವರಾಜ ಸಂಗನಪೇಟಿ, ಬಸವರಾಜ ಕರಿಗಾರ, ಪ್ರಕಾಶ ನಡಗೇರಿ, ಸಂಗಮೇಶ ಕೆಂಭಾವಿಮಠ, ಬಸವರಾಜ ಬಂಡಿವಡ್ಡರ, ಮಹಮ್ಮದಲಿ ಶೇಖ್, ಹೈದರ ಖವಾಸ, ಇಸ್ಮಾಯಿಲ್ ಖಾಗದ, ಮುತ್ತಪ್ಪ ಸುಂಕದ, ಗುಡುಸಾಬ ಗಾಡಿ ಇದ್ದರು.


