ವಿಜಯಸಾಕ್ಷಿ ಸುದ್ದಿ, ಮುಂಬಯಿ
ಕೊರೊನಾದಿಂದಾಗಿ ಸದ್ಯ ಇಡೀ ದೇಶವೇ ಪರಿತಪಿಸುತ್ತಿದೆ. ಈ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಹಲವಾರು ಸೆಲೆಬ್ರಿಟಿಗಳು ಮನ ಮಿಡಿಯುತ್ತಿದ್ದಾರೆ. ಸೋನು ಸೂದ್, ಅಕ್ಷಯ್ ಕುಮಾರ್ ಸೇರಿದಂತೆ ತಾರೆಯರ ದಂಡೇ ಜನರ ಸೇವೆಗೆ ನಿಂತಿದೆ. ಇವರ ಸಾಲಿಗೆ ಸದ್ಯ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಸೇರಿದ್ದಾರೆ.
ಜನರ ಕಷ್ಟ ಕಂಡು ಸದ್ಯ ವಿರಾಟ್ ಕೊಹ್ಲಿ ಅವರು ಪತ್ನಿಯೊಂದಿಗೆ ಸಹಾಯ ಹಸ್ತ ಚಾಚಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಕಷ್ಟಕ್ಕೆ ಬಂದಿರುವ ಜನರ ನೆರವಿಗಾಗಿ ಬಾಲಿವುಡ್ ನಟಿ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಅವರು ರೂ. 2 ಕೋಟಿ ದೇಣಿಗೆ ನೀಡಿದ್ದಾರೆ. ಅಲ್ಲದೇ, ಇದರೊಂದಿಗೆ ನಿಧಿ ಸಂಗ್ರಹ ಮಾಡಲು ಮುಂದಾಗಿದ್ದಾರೆ.
ಕೆಟ್ಟೋ ಎಂಬ ಸ್ವಯಂ ಸೇವಾ ಸಂಸ್ಥೆಯೊಂದರ ಜೊತೆ ಕೈ ಜೋಡಿಸಿ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಇದು ಕಷ್ಟದ ಸಮಯ. ಕಷ್ಟದಲ್ಲಿರುವವರೊಂದಿಗೆ ನಿಂತು ಕೈಲಾದ ಸಹಾಯ ಮಾಡಬೇಕು. ಪ್ರತಿಯೊಬ್ಬರು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಈ ದಂಪತಿ ಸದ್ಯ ಮನವಿ ಮಾಡಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಲ್ಲರೂ ತಮ್ಮ ಹಾಗೂ ತಮ್ಮ ಸುತ್ತಮುತ್ತಲಿರುವವರ ಬಗ್ಗೆ ಕಾಳಜಿ ವಹಿಸಿ ಎಂದು ಜನರಲ್ಲಿ ಈ ದಂಪತಿ ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಅಂದರೆ ಮೇ. 1ರಂದು ಅನುಷ್ಕಾ ಅವರ ಹುಟ್ಟು ಹಬ್ಬವಿತ್ತು. ಆದರೆ, ಜನ ನೋವಿನಲ್ಲಿದ್ದ ಈ ಸಮಯದಲ್ಲಿ ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.