ವಿಜಯಸಾಕ್ಷಿ ಸುದ್ದಿ, ಗದಗ: ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರುಗಳ ಪ್ರದೇಶಾಬಿವೃದ್ಧಿ ಅನುದಾನದಡಿಯಲ್ಲಿ ಕೈಗೊಂಡ ಕಾಮಗಾರಿಗಳ ಕುರಿತಂತೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಪ್ರಗತಿ ಪರಿಶೀಲನೆ ಜರುಗಿತು.
ಎಮ್ಪಿ ಹಾಗೂ ಎಮ್ಎಲ್ಸಿ ಪ್ರದೇಶಾಭಿವೃದ್ಧಿ ಅನುದಾನದಡಿ ಕೈಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆಯು ಕೆಡಿಪಿ ಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗುತ್ತದೆ. ಕೆಡಿಪಿ ವರದಿಯನ್ನು ನೇರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಗಮನಿಸುವರು. ಇದನ್ನೆಲ್ಲ ಅನುಷ್ಠಾನ ಏಜೆನ್ಸಿಗಳು ಗಮನದಲ್ಲಿಟ್ಟುಕೊಂಡು ಕಾಮಗಾರಿಗಳನ್ನು ನಿರ್ವಹಿಸಬೇಕು ಎಂದು ಡಾ. ದುರಗೇಶ್ ಕೆ.ಆರ್ ತಿಳಿಸಿದರು.
ಕಾಮಗಾರಿ ನಿರ್ವಹಿಸುವಾಗ ನಿಗದಿಪಡಿಸಿದ ಅವಧಿ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಕಾಮಗಾರಿ ಅನುಷ್ಠಾನದಲ್ಲಿ ತೊಡುಕುಗಳು ಎದುರಾದಲ್ಲಿ ತಕ್ಷಣವೇ ಜಿಲ್ಲಾಡಳಿತದ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
2022-23 ಹಾಗೂ 2023-24ರ ಆರ್ಥಿಕ ವರ್ಷದಲ್ಲಿ ಕೈಗೊಂಡ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಪೂರ್ಣಗೊಳಿಸಿದ ಮಾಹಿತಿಯನ್ನು ಮುಂದಿನ ಒಂದು ವಾರದೊಳಗಾಗಿ ಗಾಂಧೀ ಸಾಕ್ಷಿ ಪೋರ್ಟಲ್ನಲ್ಲಿ ನಿಯಮಾನುಸಾರ ಛಾಯಾಚಿತ್ರಗಳೊಂದಿಗೆ ಅಪ್ಲೋಡ್ ಮಾಡಬೇಕು. ನೋಂದಣಿಗೆ ವಿನಾಕಾರಣ ವಿಳಂಬ ಬೇಡ ಎಂದು ಸೂಚಿಸಿದರು.
ಕಾಮಗಾರಿ ಪೂರ್ಣಗೊಳಿಸಿದ ಬಗ್ಗೆ ಥರ್ಡ್ ಪಾರ್ಟಿ ಪರಿಶೀಲನಾ ವರದಿ ಕಡ್ಡಾಯವಾಗಿದೆ. 2023-24ರ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅನುಷ್ಠಾನ ಏಜೆನ್ಸಿಗಳು ಆಗಸ್ಟ್ 20ರೊಳಗಾಗಿ ಬಾಕಿ ಉಳಿದ ಅಂದಾಜು ಪಟ್ಟಿ ಸಲ್ಲಿಸಬೇಕು. ಜೊತೆಗೆ ಕಾಮಗಾರಿ ಪೂರ್ಣಗೊಳಿಸಿದ ಕುರಿತಂತೆ ಬಳಕೆ ಪ್ರಮಾಣಪತ್ರ ನೀಡಬೇಕು. ಒಟ್ಟಾರೆ ಒದಗಿಸಿದ ಅನುದಾನ ಸದ್ಬಳಕೆಯಾಗುವಂತೆ ಅನುಷ್ಠಾನ ಏಜೆನ್ಸಿಗಳು ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರ, ಪಿಆರ್ಇಡಿ, ಕೆಆರ್ಐಡಿಎಲ್, ಗ್ರಾಮೀಣ ನೀರು ಸರಬರಾಜು, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಅನುಷ್ಠಾನ ಏಜೆನ್ಸಿ ಹಾಗೂ ಇಲಾಖೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಪಾಲ್ಗೊಂಡು ತಮಗೆ ವಹಿಸಿದ ಕಾಮಗಾರಿಗಳ ಕುರಿತು ಪ್ರಗತಿ ವರದಿಯನ್ನು ನೀಡಿದರು
ಕಾಮಗಾರಿ ಬದಲಾವಣೆಗೆ ಬಯಸಿದಲ್ಲಿ ಸಂಬಂಧಿತ ಜನಪ್ರತಿನಿಧಿಗಳಿಂದ ಕಾಮಗಾರಿ ಬದಲಾವಣೆ ಕುರಿತಂತೆ ಮಾಹಿತಿ ಸಲ್ಲಿಸಿ ಕಾಮಗಾರಿ ಮಾರ್ಪಡಿಸಲು ಅವಕಾಶವಿದ್ದು, ಅನುಷ್ಠಾನ ಏಜೆನ್ಸಿಗಳು ಈ ಕುರಿತಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ತಿಳಿಸಿದರು.