ಬೆಂಗಳೂರು: ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣ ಸಂಬಂಧ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿಚಾರಣೆಗೆ ಹಾಜರಾಗಿದ್ದು, ವಿಚಾರಣೆ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ಅವರನ್ನು ಹಿಂಬಾಗಿಲಿನಿಂದ ಹೊರಬಿಟ್ಟಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಕ್ರಮವು ತೀವ್ರ ಚರ್ಚೆಗೆ ಕಾರಣವಾಗಿದೆ.
ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ವಕೀಲರೊಂದಿಗೆ ಹಾಜರಾದ ರಿಕ್ಕಿ ರೈ ವಿಚಾರಣೆಗೆ ಒಳಗಾದರು. ವಿಚಾರಣೆ ಮುಗಿದ ನಂತರ ಮಾಧ್ಯಮದ ಕಣ್ಣಿಗೆ ತಪ್ಪಿಸಿ, ಹಿಂಬಾಗಿಲು ಮೂಲಕ ಬಿಡುಗಡೆ ಮಾಡಲಾಗಿದೆ. ಈ ಕ್ರಮ ಸಾರ್ವಜನಿಕರಲ್ಲಿ ಕುತೂಹಲ ಮತ್ತು ಚರ್ಚೆ ಹುಟ್ಟಿಸಿದೆ.
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಎಸಿಎಂಎಂ ಕೋರ್ಟ್ ರಿಕ್ಕಿ ರೈಗೆ ನಿರೀಕ್ಷಣಾ ಜಾಮೀನು ನೀಡಿದೆ. ಬಿಎನ್ಎಸ್ 184 ಅಡಿ ಎಫ್ಐಆರ್ ದಾಖಲಾಗಿದ್ದ ಹಿನ್ನೆಲೆ, ಕೋರ್ಟ್ನಲ್ಲಿ ಖುದ್ದಾಗಿ ಹಾಜರಾಗಿರುವ ರಿಕ್ಕಿ ರೈ 1 ಲಕ್ಷ ರೂ. ಬಾಂಡ್ ಮತ್ತು ಶ್ಯೂರಿಟಿ ಹೊಂದಿ ಜಾಮೀನು ಪಡೆದಿದ್ದಾರೆ. ತನಿಖೆಗೆ ಸಹಕರಿಸಲು ಸೂಚನೆ ನೀಡಲಾಗಿದೆ.
ರಿಕ್ಕಿ ರೈ ಪರ ವಕೀಲ ನಾರಾಯಣ ಸ್ವಾಮಿ ಮಾಧ್ಯಮಗಳಿಗೆ ವಿವರಿಸಿದರು: “ಕಾರಿನಲ್ಲಿ ಬ್ರೇಕ್ ತೊಂದರೆ ಆಗಿದ್ದು, ಡ್ರೈವರ್ನ ತಪ್ಪು. ರಿಕ್ಕಿ ರೈ ಯಾವುದೇ ಡ್ರಿಫ್ಟಿಂಗ್ ಮಾಡಿದ್ದಾರೆ ಅಥವಾ ಉದ್ದೇಶಪೂರ್ವಕ ಕ್ರೇಜ್ ಹೊಂದಿಲ್ಲ. ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಅರ್ಥವಾಗುತ್ತಿಲ್ಲ” ಎಂದಿದ್ದಾರೆ.



