ವಿಜಯಸಾಕ್ಷಿ ಸುದ್ದಿ, ಗದಗ
ಕೊರೊನಾ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಸದ್ಯ ರಾಜ್ಯದ ಎಲ್ಲೆಡೆ ವಾಹನ ಸಂಚಾರ ಬಂದ್ ಆಗಿದೆ. ಆದರೆ, ಸಂಬಂಧಿಕರ ಮದುವೆ ಇದ್ದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕನೊಬ್ಬ ನೂರಾರು ಕಿ.ಮೀ ನಡೆದುಕೊಂಡೇ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ. ಈ ವ್ಯಕ್ತಿ ಕಂಡ ಪೊಲೀಸರು, ಅನ್ನ, ನೀರು ನೀಡಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ನಿವಾಸಿಯಾಗಿದ್ದ ಮರಿಯಪ್ಪ ಎಂಬ ವ್ಯಕ್ತಿ, ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಘೋಷಣೆಯಾಯಿತು. ಹೀಗಾಗಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಯಿತು. ಆದರೆ, ಲಾಕ್ ಡೌನ್ ಸಮಯದಲ್ಲಿಯೇ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಸಂಬಂಧಿಕರ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಮದುವೆಗೆ ಹೋಗಲೇಬೇಕು ಎಂದು ಮಂಗಳೂರಿನಿಂದ ಬಾಗಲಕೋಟೆ ಜಿಲ್ಲೆಯವರಿಗೆ ನಡೆದುಕೊಂಡೇ ಮರಿಯಪ್ಪ ತೆರಳುತ್ತಿದ್ದಾನೆ.
ಮಾರ್ಗ ಮಧ್ಯೆ ಈ ವ್ಯಕ್ತಿಯನ್ನು ಕಂಡ ಜಿಲ್ಲೆಯ ರೋಣ ಪೊಲೀಸರು, ವಿಚಾರಣೆ ಮಾಡಿದಾಗ ಮರಿಯಪ್ಪ ಹಸಿವಿನಿಂದ ಬಳಲುತ್ತಿರುವುದು ಕಂಡು ಬಂದಿದೆ. ಹೀಗಾಗಿ ಕೂಡಲೇ ಆತನಿಗೆ ಅನ್ನ, ನೀರು ನೀಡಿ ಕಳುಹಿಸಿ ಕೊಟ್ಟಿದ್ದಾರೆ. ಪೊಲೀಸರ ಕಾರ್ಯಕ್ಕೆ ಮರಿಯಪ್ಪ ಕೃತಜ್ಞತೆ ಸಲ್ಲಿಸಿ ನಡೆದುಕೊಂಡೆ ಇಲಕಲ್ ಕಡೆಗೆ ಪ್ರಯಾಣ ಮುಂದುವರೆಸಿದ್ದಾನೆ.

15 ದಿನಗಳ ಹಿಂದೆಯಷ್ಟೇ ರೋಣ ಪೊಲೀಸ್ ಠಾಣೆಯ ಪಿಎಸ್ ಐ ವಿನೋದ್ ಪೂಜಾರಿ ಹಾಗೂ ಅವರ ಜೀಪ್ ಚಾಲಕ ಸೇರಿ ಗ್ರಾಮ ಲೆಕ್ಕಾಧಿಕಾರಿಗಳನ್ನು ಥಳಿಸಿರುವ ಸುದ್ದಿ ವೈರಲ್ ಆಗಿತ್ತು. ಈ ಕುರಿತು ರಾಜ್ಯದಾದ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಡ ಕೂಡ ಕೇಳಿ ಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಗದಗ ಜಿಲ್ಲಾ ವರಿಷ್ಠಾಧಿಕಾರಿ ಅವರು ಪಿಎಸ್ ಐಗೆ ಮೆಮೋ ನೀಡಿದ್ದರು. ಇದರ ಮದ್ಯೆ ಸದ್ಯ ಇದೇ ಪಿಎಸ್ ಐ ಮಾನವೀಯತೆ ಮೆರೆದಿದ್ದಾರೆ.