ವಿಜಯಸಾಕ್ಷಿ ಸುದ್ದಿ, ಗದಗ
ಕೃಷ್ಣಮೃಗ ಬೇಟಿಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಸಿಕ್ಕಿ ಬಿದ್ದಿದ್ದು, ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.
ತಾಲೂಕಿನ ಕಣಗಿನಹಾಳ ಗ್ರಾಮದ ಹೊರವಲಯದಲ್ಲಿ ಒಂದು ಹೆಣ್ಣು, ಹಾಗೂ ಗಂಡು ಕೃಷ್ಣ ಮೃಗ ಬೇಟಿಯಾಡಿದ್ದ ಖದೀಮರು, ಮಾಂಸ ಮಾರಾಟ ಮಾಡುತ್ತಿದ್ದರು.
ಖಚಿತ ಮಾಹಿತಿ ಪಡೆದ ಗದಗ ಗ್ರಾಮೀಣ ಠಾಣೆಯ ಪಿಎಸ್ಐ ಅಜಿತಕುಮಾರ್ ಹೊಸಮನಿ ಹಾಗೂ ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಬ್ಬ ಪರಾರಿಯಾಗಿದ್ದಾನೆ.
ಬಂಧಿತರನ್ನು ರಾಮಚಂದ್ರಪ್ಪ ಹನಮಪ್ಪ ಹರಣಶಿಕಾರಿ ಹಾಗೂ ಮಲ್ಲಿಕಾರ್ಜುನ ಕಾಯಪ್ಪ ಹಾತಲಗೇರಿ ಎನ್ನಲಾಗಿದೆ. ಇನ್ನೊಬ್ಬ ಪ್ರಮುಖ ಆರೋಪಿ ಸುರೇಶ ರಾಮಪ್ಪ ದೊಡ್ಡಮನಿ ಪರಾರಿಯಾಗಿದ್ದಾನೆ.
ಬಂಧಿತರಿಂದ ಇನ್ನೂ ಮಾರಾಟವಾಗದೇ ಉಳಿದಿದ್ದ ಒಂದು ಕೃಷ್ಣ ಮೃಗದ ಕಳೇಬರ ವಶಪಡಿಸಿಕೊಳ್ಳಲಾಗಿದೆ.

ಆರ್ ಎಫ್ಒ ರಾಜು ಗೊಂದಕರ್, ಡಿವೈಆರ್ ಎಫ್ಒ ಗಳಾದ ಆರ್ ವೈ ಕಂಬಳಿ, ಎಮ್ ಎಸ್ ನಾಗಮ್ಮನವರ್, ಬಿಂಕದಕಟ್ಟಿಯ ಅರಣ್ಯರಕ್ಷಕರಾದ ಬಸವರಾಜ್ ಅಂಗಡಿ, ಅಮೀನಸಾಬ್ ಬಳೂಟಗಿ, ಗ್ರಾಮೀಣ ಠಾಣೆಯ ಮುಖ್ಯ ಪೇದೆ ಚೌಡರ್ ಹಾಗೂ ಬೂದಿಹಾಳ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಹಾಗೂ ಪೊಲೀಸರ ಕಾರ್ಯಕ್ಕೆ ಡಿಸಿಎಫ್ ಸೂರ್ಯಸೇನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಾಸ್ಟರ್ ಮೈಂಡ್ ಪರಾರಿ
ಪ್ರಕರಣದ ಪ್ರಮುಖ ಆರೋಪಿ ಸುರೇಶ್ ರಾಮಪ್ಪ ದೊಡ್ಡಮನಿ ಪರಾರಿಯಾಗಿದ್ದಾನೆ. ಕಣಗಿನಹಾಳ ಗ್ರಾಮದ ಬಲ್ಲ ಮೂಲಗಳ ಪ್ರಕಾರ ಜಿಂಕೆ, ಕೃಷ್ಣ ಮೃಗ ಬೇಟಿಯಾಡಿ ಮಾಂಸ ಮಾರಾಟ ಮಾಡೋದನ್ನು ದಂದೆಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಯಾರೂ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.