- ಬಿಜೆಪಿ ಸರ್ಕಾರದ ವಿರುದ್ಧ ಕಾರವಾರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ
ವಿಜಯಸಾಕ್ಷಿ ಸುದ್ದಿ, ಕಾರವಾರ
ಬಿಜೆಪಿ ಭ್ರಷ್ಟ ಪಕ್ಷ, ರಾಜ್ಯದಲ್ಲಿರುವುದು ಭ್ರಷ್ಟ ಸರಕಾರವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಾವು ಸಾಚಾಗಳು, ಸಂಸ್ಕೃತಿಯವರು ಎಂದು ತೋರಿಸಿಕೊಳ್ತಾರೆ.
ಆದರೆ, ಬಿಜೆಪಿಯವರು ಸಂಸ್ಕೃತಿ ರಹಿತರು ಎಂದು ಟೀಕಿಸಿದ ಅವರು, ಯಡಿಯೂರಪ್ಪರವರನ್ನು ಯಾಕೆ ಇಳಿಸಿದ್ರು? 75 ವರ್ಷ ಆಯ್ತುಂತ ಇಳಿಸಿದ್ರಾ..? ಎಂದು ಪ್ರಶ್ನಿಸಿದರು.
ಬೊಮ್ಮಾಯಿ ನೂತನ ಸಿಎಂ, ಅವರ ಬಗ್ಗೆ ಟೀಕೆ ಮಾಡಲು ಹೋಗಲ್ಲ. ಕೊರೊನಾ ನಿಯಂತ್ರಣ ಮಾಡೋದು ಸರಕಾರದ ಪ್ರಾಥಮಿಕ ಕರ್ತವ್ಯ. ಕೇರಳದಲ್ಲಿ ಮೂರನೇ ಅಲೆ ಬಂದಿದೆ. ಮಹಾರಾಷ್ಟ್ರದಲ್ಲೂ ಜಾಸ್ತಿಯಾಗಿದೆ.
ಬಾರ್ಡರ್ನಲ್ಲಿ ಕಟ್ಟೆಚ್ಚರ ವಹಿಸಬೇಕು. ಬಿಗಿಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎರಡು ಡೋಸ್ ತೆಗೆದುಕೊಂಡವರನ್ನು ಮಾತ್ರ ಒಳಗೆ ಬಿಡಬೇಕು. ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಬಂದರೆ ಮಾತ್ರ ರಾಜ್ಯದೊಳಗೆ ಬಿಡಬೇಕು. ಈಗಾಗಲೇ ಜನರು ಆಕ್ಸಿಜನ್, ಬೆಡ್ ಇಲ್ಲದೇ ತೊಂದರೆ ಅನುಭವಿಸಿದ್ದಾರೆ. ಮುಂದೆ ಇದು ಮರುಕಳಿಸದಂತೆ ನೋಡಿಕೊಳ್ಳುವ ಬದಲು ಸಿಎಂ ಮಂತ್ರಿಮಂಡಳ ರಚನೆಯಲ್ಲಿ ಬ್ಯುಜಿ ಆಗಿದ್ದಾರೆ. ಪದೇ ಪದೇ ಹೈಕಮಾಂಡ್ ಭೇಟಿಗೆ ತೆರಳುತ್ತಿದ್ದಾರೆ. ಹೈಕಮಾಂಡ್ ಕೂಡಾ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಶಾಸಕರು ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಸಿಕ್ಕಾಕ್ಕೊಂಡಿದ್ದಾರೆ. ಅವರಿಗೆ ಮಂತ್ರಿಯಾಗೋದು ಮುಖ್ಯವಾಗಿದೆ. ಜನರ ಸಮಸ್ಯೆಯಲ್ಲ ಎಂದು ದೂರಿದರು.
ರೇಣುಕಾಚಾರ್ಯ ಕೋರ್ಟ್ ಮೊರೆ ಹೋಗಿದ್ದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಇವರು ಯಾವುದೋ ಸ್ಕ್ಯಾಂಡಲ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸೆಕ್ಸ್ ಹಾಗೂ ಇತರ ಸ್ಕ್ಯಾಮ್ನಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಅದಕ್ಕೆ ಹೋಗಿದ್ದಾರೆ ಎಂದರು. ಜೆಡಿಎಸ್ ಸೆಕ್ಯೂಲರ್ ಪಾರ್ಟಿ ಅಲ್ಲ. ಅದಕ್ಕೆ ತರ್ಪಣ ಬಿಟ್ಟು ಬಹಳ ಸಮಯವಾಯ್ತು. ದೇವೆಗೌಡರ ಬಗ್ಗೆ ನಾನು ಮಾತನಾಡಲ್ಲ ಎಂದರು.