ವಿಜಯಸಾಕ್ಷಿ ಸುದ್ದಿ, ಗದಗ
ವಂಚಕರು ಯಾರನ್ನು ಬೇಕಾದರೂ ಯಾಮಾರಿಸಬಹುದು. ದೇಶದ ಗಡಿ ಕಾಯೋ ಸೈನಿಕನಾದರೂ ಅಷ್ಟೇ, ಜನ ಸಾಮಾನ್ಯರು ಆದರೂ ಅಷ್ಟೇ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಕಣ್ಣಮುಂದಿದೆ.
ಸಿಕ್ಕಿಂ ರಾಜ್ಯದ ಗಡಿಯಲ್ಲಿ ದೇಶಸೇವೆ ಮಾಡುತ್ತಿರುವ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪೂರ ಗ್ರಾಮದ ಈರಪ್ಪ ಎಂಬುವವರೇ ಮೋಸಕ್ಕೆ ಒಳಗಾದವರು. ಅದು ಬರೋಬ್ಬರಿ 1ಲಕ್ಷ 70 ಸಾವಿರ ಕಳೆದುಕೊಂಡಿದ್ದಾರೆ.
ಆಗಿದ್ದೆನು?
ಕೆಲಸದ ನಿಮಿತ್ತ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಈರಪ್ಪ, ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹೋಗಲು ವಿಮಾನದ ಟಿಕೆಟ್ ಬುಕ್ ಮಾಡಿಸಿದ್ದಾರೆ.
ಆದರೆ ಹಿರಿಯ ಅಧಿಕಾರಿಗಳು ಸದ್ಯಕ್ಕೆ ಬೇಡ ಇನ್ನೊಂದಿಷ್ಟು ದಿನ ಬಿಟ್ಟು ಬರಲು ಹೇಳಿದ್ದಾರೆ. ಇದರಿಂದಾಗಿ ಬುಕ್ ಮಾಡಿಸಿದ್ದ ಟಿಕೆಟ್ ರದ್ದು ಪಡಿಸಲು ಗೂಗಲ್ ತಡಕಾಡಿದ್ದಾರೆ.
ಆಗ ಸಿಕ್ಕ ನಂಬರವೊಂದಕ್ಕೆ ಕರೆ ಮಾಡಿದಾಗ ಎನಿಡೆಸ್ಕ್ ಸಾಫ್ಟವೇರ್ (ಇನ್ನೊಬ್ಬರ ಕಂಪ್ಯೂಟರ್ ನೋಡಲು ಬಳಸುವ ತಂತ್ರಾಂಶ)
ಹಾಕಿಕೊಂಡು ಆಕ್ಸಸ್ ಕೊಡಲು ಸೂಚಿಸಿದ್ದಾರೆ.
ವಂಚಕರು ಹೇಳಿದಂತೆ ಎನಿಡೆಸ್ಕ್ ಆರಂಭವಾಗುತ್ತಿದ್ದಂತೆ ಸೈಬರ್ ಖದೀಮರು ಅಸಲಿ ಆಟ ಶುರುಮಾಡಿಕೊಂಡಿದ್ದಾರೆ.
ಯೂಸರ್ ನೇಮ್, ಪಾಸ್ ವರ್ಡ್ ಹಾಕಲು ಹೇಳಿ, ಅದರಿಂದ ಬಂದ ಓಟಿಪಿ ನಂಬರ್ ಕೇಳಿದ್ದಾರೆ. ಖದೀಮರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಈರಪ್ಪ ಉತ್ತರ ನೀಡುತ್ತಾ ಹೋಗಿದ್ದಾರೆ.
ಹೀಗೆ ಎಸ್ ಬಿ ಆಯ್ ಬ್ಯಾಂಕಿನ ಅಕೌಂಟ್ ನಂಬರ್ ನಿಂದ 1ಲಕ್ಷ 70 ಸಾವಿರ ಹಣ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಡ್ರಾ ಆಗಿದೆ. ಇದರಿಂದ ಕಂಗಾಲಾದ ಸೈನಿಕ ಸೀದಾ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆಯ ಇನ್ಸ್ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.