
ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಗವಿ ಶ್ರೀ ಕಪ್ ರಾಜ್ಯಮಟ್ಟದ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಭಾನುವಾರ ಚಾಲನೆ ದೊರೆಯಲಿದೆ ಎಂದು ಕ್ರೀಡಾಕೂಟದ ಆಯೋಜಕ ಶ್ರವಣಕುಮಾರ ತಿಳಿಸಿದರು.
ನಗರದ ಮೀಡಿಯಾ ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ 52 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.
ಈ ಟೂರ್ನಿಯ ಪ್ರತಿ ಪಂದ್ಯವು ತಲಾ 12 ಓವರ್ ಗಳ ಪಂದ್ಯವಾಗಿದೆ. ಪ್ರಥಮ ಬಹುಮಾನ 2.50 ಲಕ್ಷ ರೂಪಾಯಿ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ದ್ವಿತೀಯ ಬಹುಮಾನ 1 ಲಕ್ಷ ರೂಪಾಯಿ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ತೃತೀಯ ಬಹುಮಾನ 50 ಸಾವಿರ ರೂಪಾಯಿ ಹಾಗೂ ಆಕರ್ಷಕ ಟ್ರೋಫಿ ಹೊಂದಿದೆ. ಗವಿಶ್ರೀ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಗಮಿಸುವ ತಂಡಗಳಿಗೆ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಭಾನುವಾರ ಬೆಳಿಗ್ಗೆ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಟೂರ್ನಿಗೆ ಚಾಲನೆ ನೀಡುವರು. ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ್, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಸೇರಿ ಹಲವರು ಉಪಸ್ಥಿತರಿರುವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಟೂರ್ನಿಯ ಆಯೋಜಕ ಸೈಯದ್ ಮಹಿಮೂದ್ ಹುಸೇನ್, ಕ್ರಿಕೆಟಿಗ ಮೈನುದ್ದೀನ್ ವರ್ದಿ ಇದ್ದರು.