ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಇದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಜೂ. 18ಕ್ಕೆ ಶಾಸಕರ ಸಭೆ ನಡೆಸುವಂತೆ ರಾಜ್ಯ ಬಿಜೆಪಿಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ ಎನ್ನಲಾಗಿದ್ದು, ಸಾಕಷ್ಟು ಸಂಚಲನ ಮೂಡಿಸಿದೆ.
ಇತ್ತೀಚೆಗಷ್ಟೇ ಸಿಎಂ ಯಡಿಯೂರಪ್ಪ ಅವರು, ಇನ್ನೂ ಎರಡು ವರ್ಷಗಳ ಕಾಲ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದರ ಮಧ್ಯೆ ಹೈಕಮಾಂಡ್ ಕೂಡ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯ ವಿಚಾರ ಇಲ್ಲ. ಸಿಎಂ ಯಡಿಯೂರಪ್ಪ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರೇ ಮುಂದುವರೆಯುತ್ತಾರೆ ಎಂದು ಹೇಳಿತ್ತು. ಇದರ ಬೆನ್ನಲ್ಲಿಯೇ ಮತ್ತೆ ಈ ವಿಷಯ ಜೀವಂತಿಕೆ ಉಳಿಸಿಕೊಂಡಿದ್ದು, ಹಲವಾರು ವದಂತಿಗಳು ಹರಿದಾಡುತ್ತಿವೆ. ಹೀಗಾಗಿ ರಾಜ್ಯ ಬಿಜೆಪಿ ಶಾಸಕರ ಜೊತೆ ಸಭೆ ನಡೆಸಲು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಾಯಕತ್ವ ಬದಲಾವಣೆಯ ಕುರಿತು ಇರುವ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಶಾಸಕರ ಸಭೆ ನಡೆಸಬೇಕೆಂದು ಹಲವು ಶಾಸಕರು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಒತ್ತಡ ಹಾಕುತ್ತಿದ್ದರು. ಹೀಗಾಗಿ ಬಂಡಾಯ ಶಾಸಕರ ಒತ್ತಾಯಕ್ಕೆ ಮಣಿದು ಅರುಣ್ ಸಿಂಗ್, ಶಾಸಕರ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಾಗಿದೆ.
ಈ ನಿಟ್ಟಿನಲ್ಲಿ ಶಾಸಕರ ಸಭೆ ಆಯೋಜಿಸುವ ಸಿದ್ಧತೆ ಬಿಜೆಪಿಯಲ್ಲಿ ನಡೆದಿದೆ ಎನ್ನಲಾಗಿದೆ. ಜೂ. 18ಕ್ಕೆ ಶಾಸಕರ ಸಭೆ ನಡೆಯುವ ಸಾದ್ಯತೆ ಕೂಡ ಇದೆ. ಆ ನಂತರ ಅರುಣ್ ಸಿಂಗ್ ಅವರು ನೀಡುವ ವರದಿಯ ಮೇಲೆ ಸಿಎಂ ಯಡಿಯೂರಪ್ಪ ಅವರ ಭವಿಷ್ಯ ಅಡಗಿದೆ ಎನ್ನಲಾಗುತ್ತಿದೆ. ವಿರೋಧಿ ಬಣಗಳ ತಂತ್ರ ಫಲಿಸಲಿದೆಯೇ? ಅಥವಾ ನಾಯಕತ್ವಕ್ಕೆ ಮಾದರಿಯಾಗಿರುವ ಯಡಿಯೂರಪ್ಪ ವಿರೋಧಿಗಳ ಶಕ್ತಿ ಹತ್ತಿಕ್ಕುವರೇ? ಎಂಬುವುದನ್ನು ಕಾಯ್ದು ನೋಡಬೇಕಿದೆ.