ವಿಜಯಸಾಕ್ಷಿ ಸುದ್ದಿ, ಕೊಡಗು
ಕೊರೊನಾದಿಂದ ಸಾವನ್ನಪ್ಪಿದ ತನ್ನ ತಾಯಿಯ ತಾಯಿಯ ಮೊಬೈಲ್ ಕೊಡುವಂತೆ ಪುಟ್ಟ ಬಾಲಕಿಯೊಬ್ಬಳು ಮನವಿ ಮಾಡಿರುವ ಮನ ಮಿಡಿಯುವ ಘಟನೆ ನಡೆದಿದೆ.
ಜಿಲ್ಲೆಯ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ಹೃತಿಕ್ಷಾ ಎಂಬ ಬಾಲಕಿಯೇ ಈ ರೀತಿ ಮನವಿ ಮಾಡಿದ್ದಾಳೆ. ತಾಯಿ ಕಳೆದುಕೊಂಡು ನಾನು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ನೆನಪುಗಳು ಆ ಮೊಬೈಲ್ ನಲ್ಲಿವೆ. ದಯಾಮಾಡಿ ಆ ಮೊಬೈಲ್ ಹಿಂದಿರುಗಿಸಿ ಎಂದು ಮನವಿ ಮಾಡಿದ್ದಾಳೆ.
ತಾಯಿಯ ಮೊಬೈಲ್ ಗಾಗಿ ಈ ಬಾಲಕಿ, ಶಾಸಕರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾಲಕಿಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೇ. 16ರಂದು ಸಾವನ್ನಪ್ಪಿದ್ದಳು.
ತಾಯಿ ಕಳೆದುಕೊಂಡು ತಬ್ಬಲಿಯಾಗಿರುವ ಬಾಲಕಿ, ನನ್ನ ತಾಯಿಯೊಂದಿಗೆ ಮೊಬೈಲ್ ಕೂಡ ಮರೆಯಾಗಿದೆ. ಮೊಬೈಲ್ ತೆಗೆದುಕೊಂಡವರು ಅಥವಾ ಸಿಕ್ಕವರು ದಯವಿಟ್ಟು ಮರಳಿ ಕೊಡಿ. ತಾಯಿಯನ್ನು ಕಳೆದುಕೊಂಡ ಈ ತಬ್ಬಲಿಗೆ ಮೊಬೈಲ್ ಹಿಂದಿರುಗಿಸಿ ಎಂದು ಮನವಿ ಮಾಡಿದ್ದಾಳೆ.
ಈ ಬಾಲಕಿಯ ಪತ್ರ ಓದಿದ ಪ್ರತಿಯೊಬ್ಬ ಓದುಗರ ಕರುಳು ಹಿಂಡಿದಂತಾಗುತ್ತಿದೆ. ಹೀಗಾಗಿ ಹೃತಿಕ್ಷಾಳ ತಾಯಿಯ ಮೊಬೈಲ್ ಇದ್ದವರು ಕೂಡಲೇ ಕೊಡಬೇಕೆಂಬುವುದು ವಿಜಯಸಾಕ್ಷಿ ಪತ್ರಿಕೆ, ವೆಬ್ ಹಾಗೂ ಓದುಗರ ಮನವಿಯಾಗಿದೆ.